ಬಳ್ಳಾರಿ: ನಿಗದಿಯಾಗಿದ್ದಂತೆ ಕನ್ನಡ ಚಲನಚಿತ್ರ ಪ್ರದರ್ಶಿಸದೇ ತೆಲುಗು ಚಿತ್ರವನ್ನು ಪ್ರದರ್ಶಿಸುತ್ತಿದ್ದ ಸ್ಥಳೀಯ ಚಿತ್ರಮಂದಿರವೊಂದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕನ್ನಡ ಚಿತ್ರ `ಕೊಕ್ಕೊ~ ಹಾಗೂ ತೆಲುಗು ಚಿತ್ರ `ಬಿಸಿನೆಸ್ಮನ್~ ಚಿತ್ರಗಳು ಶುಕ್ರವಾರ ಏಕಕಾಲಕ್ಕೆ ಬಿಡುಗಡೆಯಾದವು. ಶ್ರೀನಗರ ಕಿಟ್ಟಿ ನಾಯಕರಾಗಿರುವ `ಕೊಕ್ಕೊ~ ಚಿತ್ರವನ್ನು ನಿಗದಿಯಾಗಿದ್ದಂತೆ ಶಿವ ಚಿತ್ರಮಂದಿರದಲ್ಲಿ ಪ್ರದರ್ಶಿಸಬೇಕಿತ್ತು. ಆದರೆ ಅಲ್ಲೂ ಕೂಡ ಬಿಸಿನೆಸ್ಮನ್ ಚಿತ್ರವನ್ನೇ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.
ಈ ವಿಷಯ ತಿಳಿದ ಕರುನಾಡಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಇನ್ನಿತರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಕ್ಕೆ ನುಗ್ಗಿ ತೆಲುಗುಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಈ ಹಿನ್ನೆಲೆಯಲ್ಲಿ ಚಿತ್ರಮಂದಿರ ಮಾಲೀಕರು ತೆಲುಗು ಚಿತ್ರವನ್ನು ಕೈಬಿಟ್ಟು ಕೊಕ್ಕೊ ಚಿತ್ರದ ಪ್ರದರ್ಶನವನ್ನೇ ಆರಂಭಿಸಿದರು.
ಅಷ್ಟು ಹೊತ್ತಿಗಾಗಲೇ ತೆಲುಗು ಚಿತ್ರದ ಟಿಕೆಟ್ ಮಾರಾಟವಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಸಂಘಟನೆಗಳ ಮುಖಂಡರಾದ ವಿ.ಕೆ. ಬಸಪ್ಪ, ಚಾನಾಳ್ ಶೇಖರ್ ನೇತೃತ್ವ ವಹಿಸಿದ್ದರು.