ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ಕುಮಾರ್ ಶೆಟ್ಟಿ ಬಣ) ಪದಾಧಿಕಾರಿಗಳು ನಾಡ ಕಚೇರಿ ಕಂದಾಯ ಅಧಿಕಾರಿ ಎಸ್.ಎಸ್ ತಂಗಡಗಿ, ಪುರಸಭೆ ಅಧ್ಯಕ್ಷ ಎಂ. ಸುಧೀರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಾಣೇಶ್ ಅವರಿಗೆ ಸೋಮವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಕರವೇ ಕ್ಷೇತ್ರ ಅಧ್ಯಕ್ಷ ಬಿ. ರಮೇಶ್ ಮಾತನಾಡಿ, ‘ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿಗೆ ಕೊಟ್ಯಂತರ ರೂಪಾಯಿ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಚಾಲನೆಗೊಂಡಿಲ್ಲ. ಪುರಸಭೆ ನಾಗರಿಕರಿಗೆ ಶುದ್ಧ ನೀರು ಪೂರೈಸುತ್ತಿಲ್ಲ. ಪಟ್ಟಣದಲ್ಲಿ ಹಂದಿಗಳ ಹಾವಳಿ ಅಧಿಕವಾಗಿದ್ದು, ಹೊರ ವಲಯಕ್ಕೆ ಸಾಗಿಸಬೇಕು. ಪುರಸಭೆ ಮುಖ್ಯಾಧಿಕಾರಿ ನಮೂನೆ–3, ಖಾತಾ ವರ್ಗಾವಣೆ ಪತ್ರ ಇತರೆ ಕಡತಗಳ ವಿಲೇವಾರಿ ವಿಳಂಬ ಮಾಡುತ್ತಿದ್ದು, ಕ್ರಮ ತೆಗೆದುಕೊಳ್ಳುವಂತೆ’ ಒತ್ತಾಯಿಸಿದರು.
‘ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ವೆಂಕಟೇಶ್ವರ ಚಿತ್ರಮಂದಿರದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ 1 ವರ್ಷದಿಂದ ಕುಂಟುತ್ತಾ ಸಾಗಿದೆ. ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ’ ಮನವಿ ಮಾಡಿದರು.
ಕರವೇ ನಗರ ಘಟಕ ಅಧ್ಯಕ್ಷ ಎಂ. ಇಸ್ಮಾಯಿಲ್ ಬೇಗ್, ಕರೇಕಲ್ ಮನೋಹರ, ಜೆ.ಜಿ. ಬಸವರಾಜ, ಎ. ಹನುಮಂತ, ಕೆ. ರಂಗಪ್ಪ, ಪಿ. ಪಾಂಡುರಂಗ, ಜಿ. ಸಿದ್ದಪ್ಪ, ಸಿ.ಡಿ. ರಾಜಶೇಖರ, ಬಿ. ರಮೇಶ್, ಯು. ಶರಣಪ್ಪ, ಜನಾರ್ದನ, ಸಾದಕಪ್ಪ ಇದ್ದರು.