ಆನೇಕಲ್ : ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಸಾಮಾಜಿಕ ಪ್ರಗತಿ ಸಾಧ್ಯವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ (ಎಐ&ಎಂಎಲ್) ನಿಂದಾಗಿ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ. ಇದು ಮುಂದಿನ ಪೀಳಿಗೆಯನ್ನು ಊಹೆಗೂ ಮೀರಿ ಬದಲಾಯಿಸಲಿದೆ ಎಂದು ಮಾನವಶಾಸ್ತ್ರಜ್ಞ ಡಾ.ಮೈಕಲ್ ಬಾಸ್ ಅಭಿಪ್ರಾಯಪಟ್ಟರು.
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಮೂರು ದಿನಗಳ ‘ಕೃತಕ ಬುದ್ಧಿಮತ್ತೆ ಸಮಾಜ’ ವಿಚಾರ ಸಂಕಿರಣದಲ್ಲಿ ಅವರು ವಿಚಾರ ಮಂಡಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿಯ ಕ್ರಾಂತಿಯಿಂದಾಗಿ ಸಮಾಜದಲ್ಲಿ ಅಗಾಧ ಬದಲಾವಣೆ ಸಾಧ್ಯವಾಗಿದೆ ಎಂದರು.
ಈ ಯುಗ ತಂತ್ರಜ್ಞಾನ ಯುಗವಾಗಲಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ (ಎಐ&ಎಂಎಲ್) ಎಲ್ಲ ಕ್ಷೇತ್ರವನ್ನು ಆಳಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿಯ ಬದಲಾವಣೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಗಾಧ ಅವಕಾಶ ನಿರ್ಮಾಣವಾಗುತ್ತಿವೆ ಎಂದು ಜಪಾನ್ ಕೈಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಿರುಕಿ ಹುಬುಕ ಅಭಿಪ್ರಾಯಪಟ್ಟರು.
ಕೃತಕ ಬುದ್ಧಮತ್ತೆಯಿಂದಾಗಿ ವಿವಿಧ ಕ್ಷೇತ್ರಗಳಲ್ಲಾಗಿರುವ ಬದಲಾವಣೆ, ಅವಕಾಶ ಮತ್ತು ಸವಾಲುಗಳ ಮೇಲೆ ಮೂರು ದಿನಗಳ ವಿಚಾರ ಸಂಕಿರಣ ಬೆಳಕು ಚೆಲ್ಲಲಿದೆ ಎಂದು ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್.ಜಿ.ಚೆಬ್ಬಿ ಹೇಳಿದರು.
ಕೃತಕ ಬುದ್ಧಿಮತ್ತೆಯು ಸಮಾಜಕ್ಕೆ ನೀಡುವ ಕೊಡುಗೆ ಮತ್ತು ಹೊಸ ಅನ್ವೇಷಣೆಗೆ ಅವಶ್ಯವಿರುವ ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದರು.
ಆನೇಕಲ್ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ “ಕೃತಕ ಬುದ್ಧಿ ಮತ್ತೆ ಸಮಾಜ” ಎಂಬ ವಿಷಯದ ವಿಚಾರ ಸಂಕಿರಣದ ನೋಟ
ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ, ರಿಜಿಸ್ಟ್ರಾರ್ ವಿಶ್ವನಾಥಯ್ಯ, ರೇ ಟೈಟಸ್, ಅನಿರುದ್ಧ ಶ್ರೀಧರ್, ವಿಯೆನ್ನಾ ವಿಶ್ವವಿದ್ಯಾಲಯದ ಡಾ.ಮಾರ್ಕ್, ಕೊಕೆಲ್ಬರ್ಗ್ ಇದ್ದರು.
ವಿಚಾರ ಸಂಕಿರಣಕ್ಕೆ ಇಂದು ತೆರೆ
ಮೊದಲ ಎರಡು ದಿನಗಳ ವಿಚಾರ ಸಂಕಿರಣ ಆನೇಕಲ್ ಬಳಿಯ ವಿಶ್ವವಿದ್ಯಾಲಯದಲ್ಲಿ ಮತ್ತು ಭಾನುವಾರ (ಮಾರ್ಚ್ 3) ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ.