ಹೊಸಕೋಟೆ: ತಾಲ್ಲೂಕಿನ ಸೂಲಿಬೆಲೆಯ ಕುರುಬರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲರಿಗಾಗಿ ರೂಪಿಸಿರುವ ಶಾಲಾ ಸಿದ್ಧತಾ ಕೇಂದ್ರವನ್ನು ಶಾಸಕ ಶರತ್ ಬಚ್ಚೇಗೌಡ ಶನಿವಾರ ಉದ್ಘಾಟಿಸಿದರು.
ಅಂಗವಿಕಲರು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಶಾಲಾ ಸಿದ್ದತಾ ಕೇಂದ್ರ ಸ್ಥಾಪಿಸಲಾಗಿದೆ. ಇದೇ ಮಾದರಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಕೇಂದ್ರ ಹಾಗೂ ಹೊಸಕೋಟೆ ನಗರಸಭೆಯ ಪ್ರತಿ ವಾರ್ಡಿನಲ್ಲೂ ಇಂತಹ ಕೇಂದ್ರಗಳು ಪ್ರಾರಂಭವಾಗಬೇಕು. ಇದಕ್ಕೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕಿ ನಿರ್ಮಲಾ ಮಾತನಾಡಿ, ‘ಈ ಯೋಜನೆಗೆ ಶಾಲಾ ಶಿಕ್ಷಣ ಇಲಾಖೆ ಮತ್ತು ಎನ್ಜಿಒ ಸಂಸ್ಥೆ ಅಸೋಸಿಯೇಷನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯ ಸಹಯೋಗವಿದೆ. ಈ ಹಿಂದೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮಕ್ಕಳನ್ನು ಭೇಟಿಯಾಗಬೇಕಿತ್ತು. ಆಗ ನಾವು ನಾಲ್ಕು ಜನ ಮಾತ್ರ ಇದ್ದೆವು. ತಾಲ್ಲೂಕಿನಾದ್ಯಂತ ಸಂಚಾರ ಮಾಡಬೇಕಿತ್ತು. ಆದರೆ, ಈಗ ಎಪಿಡಿ ಸಂಸ್ಥೆ ಕೈಜೋಡಿಸಿರುವುದರಿಂದ ಪ್ರತಿದಿನ ಮಕ್ಕಳಿಗೆ ಈ ಸವಲತ್ತು ಸಿಗುವಂತಾಗಿದ್ದು, ಹೆಚ್ಚಿನ ಮಕ್ಕಳು ಶಾಲೆಗೆ ಸಿದ್ಧತೆಗೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
ಎಪಿಡಿ ಸಂಸ್ಥೆಯ ಸಮನ್ವಯ ಶಿಕ್ಷಣ ನಿರ್ದೇಶಕ ಮಲ್ಲಿಕಾರ್ಜುನಯ್ಯ, ರಾಜ್ಯದಾದ್ಯಂತ ಒಟ್ಟು 2.48 ಲಕ್ಷ ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದೆ. ಅದರಲ್ಲಿ ತಾಲ್ಲೂಕಿನಲ್ಲಿ 327 ಮಕ್ಕಳು ಅಂಗವಿಕಲ ಮಕ್ಕಳಿದ್ದಾರೆ. ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ 57 ಮಕ್ಕಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಸೂಲಿಬೆಲೆಯಲ್ಲಿ ಪ್ರಥಮ ಉಪಕೇಂದ್ರ ಉದ್ಘಾಟಿಸಲಾಗಿದೆ. ಇದರಿಂದ ಹೋಬಳಿ ವ್ಯಾಪ್ತಿಯ ಸೂಲಿಬೆಲೆ, ಗಿಡ್ಡಪ್ಪನಹಳ್ಳಿ, ಕಂಬಳಿಪುರ, ದೊಡ್ಡಹರಳಗೆರೆ ಗ್ರಾಮ ಪಂಚಾಯಿತಿಗಳ ಅಂಗವಿಕಲರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಿದ್ಧತಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಬಿ.ಎನ್. ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ಗೌಡ, ಯುವ ಮುಖಂಡ ನಾರಾಯಣ ಗೌಡ, ಗ್ರಾ.ಪಂ. ಅಧ್ಯಕ್ಷ ಜನಾರ್ದನ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಬಿಆರ್ಪಿ ನಾಗರಾಜ್ ಇತರರು ಇದ್ದರು.
ಅಂಗವಿಕಲರಿಗೆ ಅನುಕೂಲ ಸೂಲಿಬೆಲೆ ಭಾಗದಲ್ಲಿ ಸುಮಾರು 27 ಅಂಗವಿಕಲರನ್ನು ಗುರುತಿಸಲಾಗಿದೆ. ಅವರು ಚಿಕಿತ್ಸೆಗಾಗಿ ನಗರಕ್ಕೆ ವಾರಕ್ಕೆ ಎರಡು ಬಾರಿ ಬರಬೇಕಿತ್ತು. ವಿದ್ಯಾರ್ಥಿಗಳು ಒಂದೆರಡು ಬಾರಿ ಬಂದು ಸುಮ್ಮನಾಗುತ್ತಿದ್ದರು. ಸಾರಿಗೆ ವ್ಯವಸ್ಥೆಯ ಕೊರತೆಯಿಂದ ನಮ್ಮ ಮನವಿಗೂ ಸ್ಪಂದಿಸುತ್ತಿರಲಿಲ್ಲ. ಸೂಲಿಬೆಲೆಯಲ್ಲಿ ಸಿದ್ಧತಾ ಕೇಂದ್ರದ ಉಪಕೇಂದ್ರವನ್ನು ಸ್ಥಾಪಿಸಿರುವುದು ಅಂಗವಿಕಲರಿಗೆ ಅನುಕೂಲವಾಗಲಿದೆ. ನಿರ್ಮಲಾ ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕಿ ಹೊಸಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.