ಈಚೆಗೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಜನಾಕರ್ಷಕ ಜೋಳದ ರಾಶಿ ಗುಡ್ಡಕ್ಕೆ ಯಾರೋ ಬೆಂಕಿ ಹಾಕಿದರು! ಅದೇ ದಿನ ಕೂಡ್ಲಿಗಿ ತಾಲ್ಲೂಕಿನ ಚಿಲಕನಹಟ್ಟಿಯ ಅಪೂರ್ವ ತಾಳೆ ಕಾಡಿಗೂ ಯಾರೋ ಬೆಂಕಿ ಹಾಕಿದಾಗ ವನ್ಯಜೀವಿಗಳೂ ಪ್ರಾಣಾಪಾಯದಿಂದ ಓಡಿಹೋಗಿವೆ! ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದಿಂದ ಬೆಂಕಿಯನ್ನು ನಂದಿಸಿದ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಚಿರತೆಯೊಂದು ಗ್ರಾಮದಲ್ಲಿ ಕಾಣಿಸಿಕೊಂಡಾಗ ಗ್ರಾಮಸ್ಥರೆಲ್ಲ ಸೇರಿ ಆ ಚಿರತೆಯನ್ನು ಸನಿಹದ ಬೆಟ್ಟಕ್ಕೆ ಅಟ್ಟಿ ಆ ಬೆಟ್ಟಕ್ಕೆ ಬೆಂಕಿ ಹಾಕಿದ ವರದಿ ಪ್ರಕಟವಾಗಿದೆ. ಇದು ವನ–ವನ್ಯಜೀವಿ–ಮಾನವ ಸಂಘರ್ಷ. ಇದರಿಂದಾಗಿ ನಮ್ಮ ಅಪರೂಪದ ಕಾಡು ಭಸ್ಮವಾಗುವುದು ಎಷ್ಟು ಸರಿ?
ಅರಣ್ಯ ನಾಶ ವಿಪರೀತವಾಗಿ, ಅದರ ಪರಿಣಾಮ ಮಳೆಯ ಮೇಲಾಗಿದೆ. ಮತ್ತೆ ಅದರ ಪರಿಣಾಮ ಅಂತರ್ಜಲದ ಮೇಲಾಗಿ ಕುಡಿಯುವ ನೀರಿಗೂ ಬರ ಬಂದಿದೆ. ಅಯೋಗ್ಯ ನೀರನ್ನು ಕುಡಿಯುವಂತಾಗಿದೆ. ಇದೆಲ್ಲ ಮಾನವನ ಸ್ವಯಂಕೃತಾಪರಾಧವಲ್ಲವೇ? ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ ಅರಣ್ಯನಾಶ ತಡೆಗಟ್ಟಬೇಕಾಗಿದೆ.