ಹೊಸಕೋಟೆ: ತಾಲ್ಲೂಕಿನ ಕಸಬಾ ಹೋಬಳಿಯ ಗಣಗಲು ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಸಿಡಿಲಾಘಾತಕ್ಕೆ ಒಳಗಾಗಿ 20ಕ್ಕೂ ಹೆಚ್ಚು ಮೇಕೆಗಳೊಂದಿಗೆ ಮೃತಪಟ್ಟ ರತ್ನಮ್ಮ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಬುಧವಾರ ಪರಿಹಾರ ಧನದ ಚೆಕ್ ವಿತರಣೆ ಮಾಡಲಾಯಿತು.
ಚೆಕ್ ವಿತರಿಸಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ಅವರು, ರತ್ನಮ್ಮ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಿ ₹ 4 ಲಕ್ಷ, ಮೇಕೆಗಳಿಗೆ ಪರಿಹಾರವಾಗಿ ₹ 1.2 ಲಕ್ಷ ಸೇರಿ ಒಟ್ಟು ₹5.2 ಲಕ್ಷ ಚೆಕ್ ನೀಡಿ, ಸಾಂತ್ವನ ಹೇಳಿದರು.
ಘಟನೆ ನಡೆದ ಕೇವಲ ಮೂರು ದಿನಗಳಲ್ಲಿ ಮೃತರ ಕುಟುಂಬಕ್ಕೆ ಜಿಲ್ಲಾಡಳಿತ ಪರಿಹಾರ ನೀಡಿದೆ. ಪಶುಸಂಗೋಪನೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಂದ ದೊರೆಯಬೇಕಿರುವ ಆರ್ಥಿಕ ನೆರವು ಕಲ್ಪಿಸುವ ವ್ಯವಸ್ಥೆ ಮಾಡಿದ್ದೇನೆ. ಆದಷ್ಟು ಬೇಗ ಅದು ಅವರಿಗೆ ತಲುಪಲಿದೆ ಎಂದರು.