ವಿಜಯಪುರ: ‘ದೇವರ ಕಾರ್ಯಗಳಲ್ಲಿ ಜಾತಿ, ಧರ್ಮ, ಮತ, ಬೇಧವಿಲ್ಲದೆ ಎಲ್ಲರೂ ಬೆರೆತು ಸಹಬಾಳ್ವೆ ನಡೆಸುವ ಮೂಲಕ ಸರ್ವಧರ್ಮಕ್ಕೆ ನಾವೆಲ್ಲರೂ ನಾಂದಿಯಾಗಬೇಕು’ ಎಂದು ಕರವೇ ಮುಖಂಡ ಟಿಲ್ಲರ್ ಮಂಜುನಾಥ್ ಹೇಳಿದರು.
ಇಲ್ಲಿನ ಯಲುವಹಳ್ಳಿ ರಸ್ತೆಯಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ನವರಾತ್ರಿಯ ಅಂಗವಾಗಿ ಆಯೋಜನೆ ಮಾಡಲಾಗಿದ್ದ ದೇವರ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೈವ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡು ಜೀವನ ರೂಪಿಸಿಕೊಂಡು ಬಂದಿರುವ ನಾವು ಇತರರಿಗೆ ಮಾದರಿಯಾಗಿ ಜೀವಿಸಬೇಕಾಗಿದೆ. ನಮ್ಮ ದೇವತಾ ಕಾರ್ಯಗಳಲ್ಲಿನ ಗೌಪ್ಯತೆ, ಇತಿಹಾಸ, ಇದರಿಂದ ಆಗುವಂತಹ ಪ್ರಯೋಜನ ಬಗ್ಗೆ ಯುವಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಧರ್ಮದ ರಕ್ಷಣೆಗೆ ಮುಂದಾಗಬೇಕಾಗಿದೆ’ ಎಂದರು.
ಇತರೆ ಧರ್ಮಗಳ ಸಂಪ್ರದಾಯಗಳನ್ನೂ ಗೌರವಿಸುವುದರ ಜೊತೆಗೆ ಎಲ್ಲ ಧರ್ಮೀಯರೊಟ್ಟಿಗೆ ಸಹಬಾಳ್ವೆ ನಡೆಸಿಕೊಂಡು ಹೋಗಬೇಕು. ಪ್ರತಿವರ್ಷ ನಡೆಯುವಂತಹ ಇಂತಹ ಧಾರ್ಮಿಕ ಕಾರ್ಯಕ್ರಮಗಳ ನೆನಪಿನಲ್ಲಿ ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪೋಷಣೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಇಂತಹ ಕಾರ್ಯಕ್ರಮಗಳಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತರಾಗಿ ಜನರಲ್ಲಿ ಸಂಘಟಿಸಬೇಕು ಎಂದರು.
ತಮಟೆ ವಾದನಗಳ ಮೂಲಕ ಯುವಜನರು ಮುನೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಸಾಗಿದರು. ಜನರು ಭಕ್ತಿಭಾವದಿಂದ ಪೂಜಿಸಿ ನಮಿಸಿದರು. ಸ್ಥಳೀಯ ಮುಖಂಡರಾದ ಮುನಿರಾಜು, ಭೈರೇಗೌಡ, ಗುಂಡಪ್ಪ, ಅಭಿಷೇಕ್ಗೌಡ, ಮುನಿಯಪ್ಪ, ವೆಂಕಟೇಶಪ್ಪ, ಲೋಕೇಶ್, ಮುನಿಕೃಷ್ಣ ಇದ್ದರು.