ವಿಜಯಪುರ: ಜೀವನದಲ್ಲಿ ತೀರ್ಥಯಾತ್ರೆ ಮಾಡುವಷ್ಟೆ ಪವಿತ್ರವಾದದ್ದು ಮತದಾನ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿದರು.
ಇಲ್ಲಿನ ಪುರಸಭಾ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ‘ಮತದಾನ ಪ್ರತಿಯೊಬ್ಬರ ಹಕ್ಕು’, ‘ನಾವು ನೀಡುವ ಮತ ಕಾಯುವುದು ದೇಶದ ಹಿತ’ ಎನ್ನುವ ಘೋಷವಾಕ್ಯದೊಂದಿಗೆ ಮತದಾನದ ಅರಿವು ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನ ಒಂದು ಪವಿತ್ರ ಕಾರ್ಯ. ಚುನಾವಣೆ ಎಂಬುದು ಸ್ಪರ್ಧಿಸುವ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವುದಿಲ್ಲ. ಅದು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಜನರು ಹಣ, ಇತರೆ ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳಬಾರದು. ವಿದ್ಯಾವಂತರು, ಹೊಸ ಮತದಾರರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಂದಾಯ ನಿರೀಕ್ಷಕ ಜಯಕಿರಣ್ ಮಾತನಾಡಿ, ಮತದಾನದ ವಿಷಯದಲ್ಲಿ ವಿದ್ಯಾವಂತರೇ ಅವಿದ್ಯಾವಂತರಾಗುತ್ತಿದ್ದಾರೆ. ಮತದಾನಕ್ಕಾಗಿ ನೀಡುವ ರಜೆಯನ್ನು ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳದೆ, ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಹೊಸ ಮತದಾರರಿಗೆ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಪ್ರಾತಕ್ಷಿಕೆಯನ್ನು ಕಂದಾಯ ಈಗಾಗಲೇ ನೀಡಲಾಗಿದೆ ಎಂದರು. ಪುರಸಭಾ ನೌಕರರು ಹಾಗೂ ಪೌರಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಿದರು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.