ವಿಜಯಪುರ:ಎಸ್.ಎಸ್.ಎಲ್.ಸಿ ಪರೀಕ್ಷೆಯು ಜು. 19 ಮತ್ತು 22ರಂದು ನಡೆಯಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಓಎಂಆರ್ ಶೀಟ್ ನೀಡಿ ಅವರು ಪರೀಕ್ಷೆಯಲ್ಲಿ ಯಾವ ರೀತಿಯಾಗಿ ಉತ್ತರಿಸಬೇಕು ಎನ್ನುವ ಕುರಿತು ಪೂರ್ವ ಸಿದ್ಧತೆ ಮಾಡಿಸಲಾಗುತ್ತಿದೆ. ಇದರಿಂದ ನಿರ್ಭಿತಿಯಿಂದ ಅವರು ಪರೀಕ್ಷೆ ಬರೆಯಲು ಸಹಕಾರಿಯಾಗಲಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪಿ. ವೆಂಕಟೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಓಎಂಆರ್ ಶೀಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೊಸ ಮಾದರಿಯಲ್ಲಿ ಉತ್ತರಿಸಬೇಕಿದೆ. ಇದರಿಂದ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಪಾಲ್ಗೊಳ್ಳಬೇಕು ಎನ್ನುವ ಕುರಿತು ತಿಳಿದುಕೊಳ್ಳಲಿದ್ದಾರೆ. ಜು. 19ರಂದು ನಡೆಯಲಿರುವ ಐಚ್ಛಿಕ ವಿಷಯಗಳಲ್ಲಿ ಒಂದೊಂದು ವಿಷಯಕ್ಕೂ ಒಂದೊಂದು ಬಣ್ಣದ ಓಎಂಆರ್ ಶೀಟ್ಗಳು ಹಾಗೂ ಜು. 22ರಂದು ನಡೆಯಲಿರುವ ಭಾಷಾ ವಿಷಯಗಳ ಪರೀಕ್ಷೆಗೆ ಒಂದೊಂದು ಬಣ್ಣದ ಓಎಂಆರ್ ಶೀಟ್ ನೀಡಲಾಗುತ್ತದೆ. ಯಾವ ಬಣ್ಣದ ಶೀಟ್ನಲ್ಲಿ ಯಾವ ವಿಷಯದ ಉತ್ತರಗಳನ್ನು ಗುರ್ತಿಸಬೇಕು ಎನ್ನುವ ಬಗ್ಗೆ ಸುಲಭವಾಗಿ ಅವರು ತಿಳಿದುಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಪರೀಕ್ಷಾರ್ಥಿಗಳು ಪರೀಕ್ಷೆ ಕೇಂದ್ರದೊಳಗೆ ಬರುವ ಮುಂಚೆ ಅವರ ದೈಹಿಕ ಉಷ್ಣತೆ ಪರೀಕ್ಷೆ ಮಾಡಿ ಒಳಗೆ ಬಿಡಲಾಗುತ್ತದೆ. ಅಂತರ ಕಾಪಾಡಿಕೊಳ್ಳಲಿಕ್ಕಾಗಿ 6 ಅಡಿಗೊಂದರಂತೆ ಬಾಕ್ಸ್ ನಿರ್ಮಿಸಲಾಗಿದೆ ಎಂದರು.
ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿಗೂ ಲಸಿಕೆ ನೀಡಲಾಗಿದೆ. ಪರೀಕ್ಷಾರ್ಥಿಗಳಲ್ಲಿ ಯಾರಲ್ಲಾದರೂ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಂತಹವರಿಗಾಗಿ ಐಸೋಲೇಷನ್ ಕೊಠಡಿಯನ್ನೂ ಸಿದ್ಧಪಡಿಸಲಾಗಿದೆ. ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷೆ ಬರೆಯಬಹುದಾಗಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.