ಸೂಲಿಬೆಲೆ: ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಹಳ್ಳಿಯ ಕೆರೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿದ್ದು, ದುಷ್ಕರ್ಮಿಗಳು ಕೆರೆ ನೀರಿಗೆ ವಿಷ ಬೇರೆಸಿದ್ದಾರೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಇದೇ ಗ್ರಾಮದ ಸುರೇಶ್ ಅವರು ವಾರ್ಷಿಕ 20 ಸಾವಿರ ನೀಡಿ, ಕೆರೆಯಲ್ಲಿ ಮೀನು ಸಾಕಣಿಕೆಗೆ ಗುತ್ತಿಗೆ ಪಡೆದಿದ್ದರು.
‘ಸುಮಾರು ₹30 ಸಾವಿರ ವೆಚ್ಚದಲ್ಲಿ ಮೀನು ಮರಿ ಖರೀದಿಸಿ ಕೆರೆಯಲ್ಲಿ ಬಿಡಲಾಗಿತ್ತು. ಇದುವರೆಗೆ ಮೀನು ಸಾಕಣಿಕೆಗೆ ₹1 ಲಕ್ಷ ಖರ್ಚು ಮಾಡಲಾಗಿತ್ತು. ಭಾನುವಾರ ಮೀನು ಹಿಡಿದು ಮಾರಾಟ ಮಾಡಲಾಗಿತ್ತು. ಸೋಮವಾರ ಬೆಳಗ್ಗೆ ಮೀನು ಹಿಡಿಯಲು ತೆರಳಿದಾಗ ಮೀನುಗಳು ಸತ್ತಿರುವುದು ಗೊತ್ತಾಗಿದೆ‘ ಎಂದು ಸುರೇಶ್ ತಿಳಿಸಿದ್ದಾರೆ.
ಇದರಿಂದ ನಷ್ಟ ಉಂಟಾಗಿದ್ದು, ಪರಿಹಾರ ನೀಡಬೇಕೆಂದು ಪಂಚಾಯಿತಿಯನ್ನು ಸುರೇಶ್ ಆಗ್ರಹಿಸಿದ್ದಾರೆ.