ವಿಜಯಪುರ: ಇಲ್ಲಿಗೆ ಸಮೀಪದ ಐಬಸಾಪುರ ಗ್ರಾಮದಲ್ಲಿನ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಯು ಪೂರ್ಣಗೊಳ್ಳದ ಕಾರಣ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. 2009 ರಲ್ಲಿ ಸೂಲಿಬೆಲೆ- ದೇವನಹಳ್ಳಿ ಮುಖ್ಯರಸ್ತೆಯಿಂದ ಸುಗಟೂರು ಗಡಿ ಮತ್ತು ಐಬಸಾಪುರದಿಂದ ವಿಜಯಪುರ- ಚನ್ನರಾಯಪಟ್ಟಣ ಮುಖ್ಯರಸ್ತೆಯ ದಿನ್ನೂರುವರೆಗೆ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿ ನಡೆದಿತ್ತು.
ಆ ಸಂದರ್ಭದಲ್ಲಿ ಐಬಸಾಪುರ ಬಸ್ನಿಲ್ದಾಣದಿಂದ ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗಡಿವರೆಗಿನ ಸುಮಾರು 1 ಕಿ.ಮೀ ರಸ್ತೆಗೆ ಒಂದು ಬದಿ ಮಾತ್ರ ಡಾಂಬರೀಕರಣದ ಎರಡನೇ ಪದರ ಹಾಕಲಾಗಿದೆ.
ಅಲ್ಲಿಂದ ಸುಮಾರು 2 ವರ್ಷಗಳಾದರೂ ಮತ್ತೊಂದು ಬದಿಗೆ ಡಾಂಬರೀಕರಣ ಹಾಕಿ ಕಾಮಗಾರಿ ಪೂರ್ಣಗೊಳಿಸುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ರಾಮಪ್ಪ.
ಒಂದು ಬದಿಯಲ್ಲಿ ಮಾತ್ರ ಡಾಂಬರು ಹಾಕಿರುವುವದರಿಂದ ರಸ್ತೆಯು ಇಬ್ಬಾಗವಾದಂತಾಗಿದೆ.
ರಾತ್ರಿ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಚಾಲಕರು ಗೊತ್ತಾಗದೇ ಮುಗ್ಗರಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿದ್ದಾರೆ.
ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.