ದೇವನಹಳ್ಳಿ: ತಾಲ್ಲೂಕು ಒಕ್ಕಲಿಗ ಸಂಘದ ಸದಸ್ಯತ್ವ ನೋಂದಣಿಗೆ ಸೆಪ್ಟೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ ತಿಳಿಸಿದರು.
ತಾಲ್ಲೂಕು ನಾಡಪ್ರಭು ಕೆಂಪೇಗೌಡ ಭವನದಲ್ಲಿ ಸೋಮವಾರ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿ ಸದಸ್ಯತ್ವ ನೋಂದಣಿಗೆ ಪ್ರವೇಶ ಶುಲ್ಕ ಹತ್ತು ರೂಪಾಯಿ ಹಾಗೂ ನೋಂದಣಿ ಶುಲ್ಕ ₨ 250 ನಿಗದಿ ಪಡಿಸಲಾಗಿದೆ.
ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮತ್ತು ವಿಳಾಸ ದೃಢೀಕರಣಕ್ಕೆ ಚುನಾವಣಾ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಇಬ್ಬರು ಸಂಘದ ನಿರ್ದೇಶಕರಿಂದ ಸಹಿ ಪಡೆದು ಸಂಪೂರ್ಣ ಸ್ವವಿವರಗಳೊಂದಿಗೆ ಭರ್ತಿಮಾಡಿ ಸಂಘಕ್ಕೆ ಸಲ್ಲಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ತಾಲ್ಲೂಕು ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಎ.ಶಿವರಾಮಯ್ಯ ಮಾತನಾಡಿ, ಮುಂಬರುವ ಅಕ್ಟೋಬರ್ 28 ರಂದು ಒಕ್ಕಲಿಗ ಸಮುದಾಯದ ವತಿಯಿಂದ ನಾಡಪ್ರಭು ಕೆಂಪೇಗೌಡ ಅವರ ಜನ್ಮದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಅಂದು ಸಮುದಾಯದಲ್ಲಿ ಕಳೆದ ವರ್ಷ ಹತ್ತನೇ ತರಗತಿ ದ್ವಿತಿಯ ಪಿ.ಯು.ಸಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರೊತ್ಸಾಹ ಧನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಕೋಶಾಧಿಕಾರಿ ಬಿ.ಎಂ.ಭೈರೇಗೌಡ, ನಿರ್ದೇಶಕ ಮುನಿಶ್ಯಾಮೇಗೌಡ, ಕೊದಂಡರಾಮಯ್ಯ, ಹನುಮಂತೇಗೌಡ, ಭೂವನಹಳ್ಳಿ ಮುನಿರಾಜು, ಜಾಲಿಗೆ ಶ್ರೀರಾಮಯ್ಯ, ದುದ್ದನಹಳ್ಳಿ ನಾಗರಾಜ್ ಹಾಗೂ ಇತತರು ಭಾಗವಹಿಸಿದ್ದರು.