ಕುದೂರು: ತಾಲ್ಲೂಕಿನ ಸುಗ್ಗನಹಳ್ಳಿ ದನಗಳ ಜಾತ್ರೆಯಲ್ಲಿ ರಾಸುಗಳ ಬೆಲೆ ಅಗ್ಗವಾಗಿದ್ದು ಗ್ರಾಹಕರು ರಾಸುಗಳ ಖರೀದಿಯ ಬಗ್ಗೆ ಮೌನ ವಹಿಸಿದ್ದಾರೆ.
10 ಸಾವಿರ ರೂಪಾಯಿಂದ 1 ಲಕ್ಷ ರೂಪಾಯಿಗಳವರೆಗೆ ಮಾರಾಟವಾಗಬಲ್ಲ ಹಸು, ಜೋಡೆತ್ತುಗಳು ಜಾತ್ರೆಯಲ್ಲಿ ಮಾರಾಟಕ್ಕೆ ಸಿದ್ಧವಿದ್ದು ರಾಸುಗಳನ್ನು ಕೊಳ್ಳುವ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗಿದೆ.
ಮೊದಲು ಬಳ್ಳಾರಿ, ಹಾವೇರಿ, ಕೊಪ್ಪಳ, ಗದಗ, ಬಿಜಾಪುರ ಜಿಲ್ಲೆಗಳಿಂದಲೂ ಗ್ರಾಹಕರು ಇಲ್ಲಿಗೆ ಬಂದು ರಾಸುಗಳ ವ್ಯಾಪಾರ ನಡೆಸುತ್ತಿದ್ದರು. ಆದರೆ ಇಂದು ಸ್ಥಳೀಯ ಗ್ರಾಹಕರು ಮಾತ್ರ ರಾಸುಗಳ ಖರೀದಿಯಲ್ಲಿ ಪಾಲ್ಗೊಳ್ಳುತ್ತಿದ್ದು ದೂರದೂರಿನ ಜನರ ಆಕರ್ಷಣೆ ಕಡಿಮೆಯಾಗುತ್ತಿದೆ.
ಒಂದೆಡೆ ದೇಶಿಯ ತಳಿಗಳು ಕಡಿಮೆಯಾಗಿದ್ದು ರಾಸುಗಳ ನಿರ್ವಹಣೆ , ಪಶು ಆಹಾರ ಬೆಲೆ ಹೆಚ್ಚಳ ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್, ಪವರ್ ಟಿಲ್ಲರ್ಗಳಂತಹ ಆಧುನಿಕ ಉಪಕರಣಗಳು ಇಂದು ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ ರಾಸುಗಳನ್ನು ಕೊಳ್ಳುವವರು ಕಡಿಮೆಯಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ಗೋಪಾಲಕರು.