ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಸೋಮವಾರ ಬಂದ್ ಕಾರಣ, ಇಲ್ಲಿಯ 28ನೇ ವಾರ್ಡ್ ಸೋಮೇಶ್ವರ ಬಡಾವಣೆಯ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಸೇರಿಕೊಂಡು ಬಡಾವಣೆಯ ರಸ್ತೆ ಬದಿಗಳಲ್ಲಿ ಖಾಲಿ ಇರುವ ಜಾಗದಲ್ಲಿ ಸಸಿಗಳನ್ನು ನೆಟ್ಟರು.
ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ, ಈ ಹಿಂದೆ ಯಾವುದೇ ವಾಹನಗಳು ಇಲ್ಲದೇ ಇದ್ದ ಕಾಲದಲ್ಲಿ ರಸ್ತೆಗಳಲ್ಲಿ ನಡೆದುಕೊಂಡೇ ಹೋಗಬೇಕಾಗಿತ್ತು. ಇದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಮರಗಳನ್ನು ಬೆಳೆಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಮರಗಳೇ ಅಪರೂಪ ಎನಿಸಿವೆ ಎಂದರು.
ಪ್ರತಿಯೊಬ್ಬರು ಒಂದೊಂದು ಸಸಿ ಬೆಳೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಇಲ್ಲಿ ನೆಟ್ಟಿರುವ ಸಸಿಗಳು ಕುರಿ, ಮೇಕೆ, ಹಸುಗಳ ಬಾಯಿಗೆ ತುತ್ತಾಗದಂತೆ ಪೋಸಿಸಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ವಡ್ಡರಹಳ್ಳಿರವಿ, ಸೋಮೇಶ್ವರ ಬಡಾವಣೆಯ ನಿವಾಸಿಗಳಾದ ಕೇಶವಮೂರ್ತಿ, ಡಾ.ಸೀತಾರಾಂ, ಶಶಿಕಲಾ ಕೇಶವಮೂರ್ತಿ, ರಾಘವೇಂದ್ರ, ಶ್ರೀನಿವಾಸ್, ಲಕ್ಷ್ಮೀಬಾಯಿ, ಆನಂದ್ ಹಾಗೂ ವಿಶ್ವಂಭರ ವಿನಾಯಕ ಗೆಳೆಯರ ಬಳಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.