ಖಾನಾಪುರ: ‘ತಾಲ್ಲೂಕಿನ ದೇವಲತ್ತಿ ಗ್ರಾಮದಲ್ಲಿ ಜ. 10ರಂದು ತಾಲ್ಲೂಕುಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ’ ಎಂದು ದೇವಲತ್ತಿ ಪಿಡಿಒ ಪ್ರಭಾಕರ ಭಟ್ ಹೇಳಿದರು.
ದೇವಲತ್ತಿಯಲ್ಲಿ ಭಾನುವಾರ ಕಸಾಪದಿಂದ ಏರ್ಪಡಿಸಿದ್ದ ಸಮ್ಮೇಳನದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮದ ಹೊರವಲಯದ ಮೈದಾನದಲ್ಲಿ ಸಮ್ಮೇಳನ ನಡೆಯಲಿದೆ. ಇದಕ್ಕೆ ಗ್ರಾಮ ಪಂಚಾಯ್ತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ವಿ. ಬಡಿಗೇರ ಮಾತನಾಡಿ, ‘ಸಾಹಿತ್ಯ ಸಮ್ಮೇಳನಕ್ಕೆ ಕಸಾಪದಿಂದ ₹ 1 ಲಕ್ಷ ಅನುದಾನ ಮಂಜೂರಾಗಿದೆ. ಅಷ್ಟು ಹಣದಲ್ಲಿ ಸಮ್ಮೇಳನ ನಡೆಸುವುದು ಅಸಾಧ್ಯ. ಹೀಗಾಗಿ ದಾನಿಗಳ ಸಹಕಾರ ಕೋರಲಾಗಿದೆ’ ಎಂದರು.
ಕಸಾಪ ಗೌರವಾಧ್ಯಕ್ಷ ಈಶ್ವರ ಸಂಪಗಾವಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜಶೇಖರ ಕಮ್ಮಾರ, ಇಟಗಿ ಗ್ರಾಮದ ನಿವೃತ್ತ ಶಿಕ್ಷಕ ಎಸ್.ಎಸ್ ಹಿರೇಮಠ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಮುಖಂಡರಾದ ಮಹಾಂತೇಶ ಕೋಡೊಳ್ಳಿ, ರಾಜು ಖಾತೆದಾರ, ಎನ್.ಎಸ್. ನಾವಲಗಟ್ಟಿ ಇದ್ದರು.
ತಮ್ಮಣ್ಣ ಇಟಗಿ ಸ್ವಾಗತಿಸಿದರು. ನಾಗೇಂದ್ರ ಚೌಗಲಾ ನಿರೂಪಿಸಿದರು. ವಿಜಯ ಪೂಜಾರ ವಂದಿಸಿದರು.