ರಾಮದುರ್ಗ: ತಾಲ್ಲೂಕಿನ ಹಲಗತ್ತಿಯಲ್ಲಿ ನೂರು ವರ್ಷಗಳ ನಂತರ ಜರುಗುತ್ತಿರುವ ಗ್ರಾಮದೇವಿಯರ ಜಾತ್ರೆಗೆ ಗುರುವಾರ ಸಂಭ್ರಮದ ಚಾಲನೆ ಸಿಕ್ಕಿತು. ಸಿಂಗಾರಗೊಂಡಿರುವ ಗ್ರಾಮದೇವಿಯರ ಮೂರ್ತಿಗಳ ಮುಸುಕು ತೆರವುಗೊಳಿಸಿ, ವೀಕ್ಷಣೆಗೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು.
ಪಂಡಿತರು ಬೆಳಗ್ಗೆಯಿಂದಲೇ ಗ್ರಾಮದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥಗಳು ಈಡೇರಿದ್ದರಿಂದ ದೇವಿಯರ ಹರಕೆ ತೀರಿಸಲು ಮಹಿಳೆಯರು ಪೂರ್ಣಕುಂಭ ಹೊತ್ತು, ಮೆರವಣಿಗೆಯಲ್ಲಿ ಸಾಗಿದರು. ಭಂಡಾರದ ಓಕುಳಿಯಲ್ಲಿ ಮಿಂದೆದ್ದರು. ಡೊಳ್ಳುವಾದನ, ಹಲಗೆಗಳ ಮೇಳ ಜನರನ್ನು
ಸೆಳೆಯಿತು.
ಉಗ್ರರೂಪಿಣಿಯಾದ ಕಿಲಬನೂರ ಮತ್ತು ಹಲಗತ್ತಿ ಗ್ರಾಮಗಳ ದ್ಯಾಮವ್ವನ ಮೂರ್ತಿಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ‘ಉಧೋ ಉಧೋ...’ ಎಂಬ ಜೈಕಾರ ಮುಗಿಲು ಮುಟ್ಟಿತ್ತು.
ಶತಮಾನದ ನಂತರ ನಡೆಯುತ್ತಿರುವ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ. ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಭಕ್ತರು, ದೇವಿಯರ ದರ್ಶನ ಪಡೆದು ಭಕ್ತಿ ಮೆರೆಯುತ್ತಿದ್ದಾರೆ. ಸರ್ವಧರ್ಮೀಯರು ಜಾತ್ರೆಯಲ್ಲಿ ಭಾಗವಹಿಸಿ, ‘ಸಾಮರಸ್ಯ’ದ ಸಂದೇಶ ಸಾರುತ್ತಿದ್ದಾರೆ. ನ.17, 18ರಂದು ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.