ಬೈಲಹೊಂಗಲ: ಪಟ್ಟಣದ ಈಶಪ್ರಭು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸಮಸ್ತ ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಎರಡು ದಿನಗಳಿಂದ ಆರಂಭಗೊಂಡಿರುವ ಬೃಹತ್ ಕೃಷಿಮೇಳ ಹಾಗೂ ಭಾರೀ ಜಾನುವಾರ ಜಾತ್ರೆ ಪ್ರದರ್ಶನದಲ್ಲಿ ಅಳವಡಿಸಿರುವ ಬಗೆ, ಬಗೆಯ ಮಳಿಗೆಗಳು ಜನರನ್ನು ಕೈ ಬಿಸಿ ಕರೆಯುತ್ತಿವೆ.
ಎಪಿಎಂಸಿ ಪ್ರಾಂಗಣದ 53 ಎಕರೆ ವಿಶಾಲವಾದ ಪ್ರದೇಶದಲ್ಲಿ ನಡೆಯುತ್ತಿರುವ ಮೇಳದ ಮೊದಲ ದಿನವೇ 240 ಮಳಿಗೆಗಳಿಗೆ ಸಾವಿರಾರು ಜನರು ಭೇಟಿ ನೀಡಿದರು. ಮಳಿಗೆಗಳಲ್ಲಿ ವಿವಿಧ ಬಗೆಯ ಸಾಮಗ್ರಿಗಳನ್ನು ಖರೀದಿಸುವ ಮೂಲಕ ಮೇಳಕ್ಕೆ ಮೆರುಗು ತಂದರು. ಮೇಳ ಜನಾಕರ್ಷಣೆಗೊಂಡು ಉತ್ತಮ ವ್ಯವಹಾರ ನಡೆಯಿತು.
ಮಳಿಗೆಗಳ ಆಕರ್ಷಣೆ: ಕೃಷಿಮೇಳದಲ್ಲಿ ತುಳಸಿ ಕಂಪನಿಯ ಕೃಷಿ ಚಟುವಟಿಕೆ ಸಾಮಗ್ರಿ ಹಾಗೂ ಪೈಪ್ಗಳು, ಕೃಷಿ ಇಲಾಖೆಯ ಜಲಾಯಾನ ಪಕ್ಷಿನೋಟ, ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಸಲಕರಣೆ ಮತ್ತು ಸಲಹಾ ಕೇಂದ್ರ, ಸಾವಯವ ಬೆಳೆಗಳ ಉತ್ಪನ್ನಗಳು, ಅರಣ್ಯ ಇಲಾಖೆಯ ಪ್ರೋತ್ಸಾಹ ಮಳಿಗೆಗಳು ಗಮನ ಸೆಳೆದವು.
ಪಶು ಸಂಗೋಪನಾ ಇಲಾಖೆಯ ಪಶು ಆಹಾರ ಸಾಮಗ್ರಿ, ಆಯುರ್ವೇದ ಚಿಕಿತ್ಸೆಯ ವಸ್ತುಗಳು, ಕೇರಳದ ಸ್ವೀಟ್ ಫ್ರೂಟ್ಸ್, ಬ್ಯಾಂಕುಗಳ ಮಳಿಗೆ, ಕೀಟನಾಶಕ ಔಷಧ, ಬೀಜ, ಗೊಬ್ಬರಗಳ ಮಳಿಗೆಗಳು, ಅರಿವೆ, ಪುಸ್ತಕ ಮಳಿಗೆಗಳು, ಕೃಷಿ, ತೋಟಗಾರಿಕೆ ಇಲಾಖೆಯಿಂದ ರೈತರು ಬೆಳೆದ ಉತ್ತಮ ಬೆಳೆಗಳ ಪ್ರದರ್ಶನ, ವಿವಿದ ಬಗೆಯ ಸಿಹಿತಿಂಡಿಗಳ ಮಳಿಗೆಗಳು ಪ್ರದರ್ಶನಗೊಂಡವು.
ಶ್ವಾನಗಳ ಪ್ರದರ್ಶನ: ಕೃಷಿಮೇಳದಲ್ಲಿ ಬೆಳಗಾವಿ ಪೊಲೀಸ್ ಇಲಾಖೆಯ ಶ್ವಾನ ಪ್ರದರ್ಶನ ನೋಡುಗರ ಮನ ಸೇಳೆಯಿತು. ಇಂದು ಹಾಗೂ ಅತಿಥಿ ಹೆಸರಿನ ಜರ್ಮನ್ ಶೆಫರ್ಡ್ ಪೊಲೀಸ್ ನಾಯಿಗಳು ಮನುಷ್ಯರ ವಾಸನೆಯ ಕೈವಸ್ತ್ರ, ಗಾಂಜಾ ಸೇರಿ ಇತರೆ ಸಾಮಗ್ರಿಗಳ ವಾಸನೆ ಹಿಡಿದು ಅದನ್ನು ಹುಡುಕಿ ತರುವ ದೃಶ್ಯ ಜನರಲ್ಲಿ ಕುತೂಹಲ ಹುಟ್ಟಿಸಿತು.
ಜಾನುವಾರು ಪ್ರದರ್ಶನದ ಮುಖ್ಯದ್ವಾರ ಹಿಡಿದು ಸಮಾರಂಭ ನಡೆಯುವ ಮುಖ್ಯವೇದಿಕೆಯವರೆಗೆ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜನಸ್ತೋಮ ಹರಿದು ಬರುತ್ತಿದೆ. ಕೃಷಿಮೇಳ ಜಾನುವಾರು ಜಾತ್ರೆಗೆ ಶುಭಕೋರಿ ಎಲ್ಲೆಡೆ ಬ್ಯಾನರ್ ಫ್ಲೆಕ್ಸ್ ಅಳವಡಿಸಲಾಗಿದೆ. ಸಮಾರಂಭದ ಮುಖ್ಯವೇದಿಕೆಯನ್ನು ಕಲಾವಿದ ಗಿರೀಶ ಹಲಸಗಿ ದಂಪತಿ ಸಿರಿಧಾನ್ಯಗಳ ಮೂಲಕ ಸಿದ್ದಪಡಿಸಿದ್ದು ವೇದಿಕೆಯ ಎರಡು ಬದಿಯಲ್ಲಿ ಅಳವಡಿಸಿರುವ ಅಕ್ಕಿ ಬರಗ ನವನೆ ಜೋಳ ಗೋದಿ ರಾಗಿ ಸೂರ್ಯಕಾಂತಿ ಸಜ್ಜಿ ಅಕ್ಕಿ ಕೊರಲೆ ಸೊಯಾಬಿನ ಗೋವಿನ ಜೋಳ ಹಾರಕ ಹೆಸರು ಸೇರಿ ಎಲ್ಲ ಸಾವಯವ ಸಿರಿಧಾನ್ಯಗಳನ್ನು ಗುಡಿಸಲು ನಿರ್ಮಿಸಿ ಪ್ರದರ್ಶಿಸಿದ್ದು ಆರೋಗ್ಯಕ್ಕೆ ನೀಡುವ ಪ್ರಯೋಜನಗಳನ್ನು ತಿಳಿಸುತ್ತಿದೆ. ಇದು ನೋಡುಗರನ್ನು ಆಕರ್ಷಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.