ಹರಿಹರ: ಹರಿಹರದ ಸಾಹಿತ್ಯ ಸಂಗಮ ಸಂಸ್ಥೆ ನೀಡುವ ‘ಹರಿಹರ ಶ್ರೀ’ ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಳಗಾವಿಯ ಅನ್ನಪೂರ್ಣ ಹಿರೇಮಠ ಹಾಗೂ ಕಾರವಾರದ ಎ.ಎನ್.ರಮೇಶ್ ಗುಬ್ಬಿ ಅವರ ಕವನ ಸಂಕಲನಗಳು ಆಯ್ಕೆಯಾಗಿವೆ.
2021 ಹಾಗೂ 2022ನೇ ಸಾಲಿನಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. 2021ನೇ ಸಾಲಿಗೆ ಅನ್ನಪೂರ್ಣ ಹಿರೇಮಠ ಅವರ ‘ಭಾವ ಸಿರಿ’ ಕವನ ಸಂಕಲನ ಹಾಗೂ 2022ನೇ ಸಾಲಿಗೆ ಎ.ಎನ್.ರಮೇಶ್ ಗುಬ್ಬಿ ಅವರ ‘ಬುದ್ಧ ನಗುತ್ತಿದ್ದಾನೆ’ ಕವನ ಸಂಕಲನ ಆಯ್ಕೆಯಾಗಿದೆ.
ರಾಜ್ಯದ ವಿವಿಧೆಡೆಯಿಂದ ಎರಡು ವರ್ಷದ ಪ್ರಶಸ್ತಿಗೆ 46 ಕವನ ಸಂಕಲನಗಳು ಬಂದಿದ್ದವು. ಆ ಪೈಕಿ ಇವರಿಬ್ಬರ ಕವನ ಸಂಕಲನಗಳು ಆಯ್ಕೆಯಾಗಿವೆ. ಶೀಘ್ರದಲ್ಲೇ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ತಿಳಿಸಿದ್ದಾರೆ.