ರಾಮದುರ್ಗ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಚಿಕ್ಕಮೂಲಂಗಿ ಗ್ರಾಮದ ಜನರು ಇಡಗಲ್ ಗ್ರಾಮ ಪಂಚಾಯ್ತಿಗೆ ಶನಿವಾರ ಬೀಗ ಹಾಕಿ ಪ್ರತಿಭಟನೆ ಮಾಡಿದರು.
ಒಂದು ವಾರದಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಖಾಸಗಿ ಕೊಳವೆ ಬಾವಿಯ ಮಾಲೀಕರೊಂದಿಗೆ ಅಧಿಕಾರಿಗಳು ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಗ್ರಾಮಸ್ಥರು ದೂರಿದರು.
ಚಿಕ್ಕ ಮೂಲಂಗಿ ಗ್ರಾಮಕ್ಕೆ ಜಲ ಜೀವನ್ಮಿಷೀನ್ಯೋಜನೆಯ ನಲ್ಲಿ ನೀರು ಬರುತ್ತಿಲ್ಲ. ಆ ನಲ್ಲಿಗೆ ಖಾಸಗಿಯವರ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಖಾಸಗಿ ಮಾಲೀಕರು ಮತ್ತು ಅಧಿಕಾರಿಗಳ ಒಡಂಬಡಿಕೆ ಇತ್ಯರ್ಥಗೊಳ್ಳದ ಹಿನ್ನಲೆಯಲ್ಲಿ ನೀರು ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದಿಂದ ಅಲ್ಲಲ್ಲಿ ಕೊಳವೆಬಾವಿ, ತೋಟದ ಮನೆಗಳಿಗೆ ಹೋಗಿ ನೀರು ತರಲಾಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ತೊಂದರೆ ಹೆಚ್ಚಾದ ಹಿನ್ನಲೆಯಲ್ಲಿ ಖಾಲಿ ಕೊಡಗಳ ಸಮೇತ ಆಗಮಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಗ್ರಾಮಸ್ಥರು ಹೇಳಿದರು.