ಬೆಳಗಾವಿ: ನಗರದ ‘ಹಳ್ಳಿಯ ಸಂದೇಶ’ ಕನ್ನಡ ದಿನಪತ್ರಿಕೆಯ ಸಂಪಾದಕ ಕುಂತಿನಾಥ ಕಲಮನಿ ಅವರಿಗೆ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ‘ಪ್ರಭಾತಕಾರ ವಾ.ರಾ. ಕೋಠಾರಿ ಆದರ್ಶ ಪತ್ರಕರ್ತ‘ ಪುರಸ್ಕಾರವನ್ನು ಈಚೆಗೆ ಪ್ರದಾನ ಮಾಡಲಾಯಿತು.
ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭೆಯ ತ್ರೈವಾರ್ಷಿಕ ಮಹಾ ಅಧಿವೇಶನದ ಶತಮಾನೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
23 ವರ್ಷಗಳಿಂದ ಸಲ್ಲಿಸಿದ ಸೇವೆ ಹಾಗೂ ಜೈನ ಸಮಾಜದಲ್ಲಿನ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿ ಸಮಾಜ ಸೇವೆ ಕೈಗೊಂಡಿದ್ದನ್ನು ಗುರುತಿಸಿ ಜೈನ ಸಭೆಯು ಪುರಸ್ಕಾರ ನೀಡಿದೆ.
ಮಹಾರಾಷ್ಟ್ರದ ಆರೋಗ್ಯ ಸಚಿವ ಹಾಗೂ ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ರಾಜೇಂದ್ರ ಶಾ.ಪಾಟೀಲ ಯಡ್ರಾವಕರ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಆರ್.ಎ. ಪಾಟೀಲ, ಡಾ.ಅಜಿತ ಪಾಟೀಲ, ಬಾಲಚಂದ್ರ ಪಾಟೀಲ, ದತ್ತ ಡೋರ್ಲೆ, ಸುರೇಶ ಪಾಟೀಲ, ಜಿ.ಜಿ. ಲೋಬೋಗೋಳ ಇದ್ದರು.