ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ 12ನೇ ಹೆಚ್ಚುವರಿ ನ್ಯಾಯಾಲಯ ವಜಾ ಮಾಡಿದೆ.
‘ಬೆಳಗಾವಿ ಮೂಲದ ಸಂಜೀವ ಭಂಡಾರಿ ಎಂಬ ಆರೋಪಿ ಈ ಪ್ರಕರಣದಲ್ಲಿ ‘ಕಿಂಗ್ಪಿನ್’ ಆಗಿದ್ದಾನೆ. ಪ್ರಕರಣ ಹೊರಬಿದ್ದಾಗಿನಿಂದ ತಲೆಮರೆಸಿಕೊಂಡಿದ್ದಾನೆ. ಹೊರರಾಜ್ಯದಲ್ಲಿ ಇದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಮಂಗಳವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ವಜಾ ಮಾಡಿದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪರೀಕ್ಷೆಯಲ್ಲಿ ಸ್ಮಾರ್ಟ್ವಾಚ್, ಬ್ಲೂಟೂತ್ ಉಪಕರಣಗಳನ್ನು ಬಳಸಿ ಅಕ್ರಮ ಎಸಗಿದ ಆರೋಪದಡಿ ಈಗಾಗಲೇ 12 ಮಂದಿಯನ್ನು ಬಂಧಿಸಲಾಗಿದೆ. ಈ ಎಲ್ಲರ ಪ್ರಕರಣಗಳಲ್ಲೂ ಬೇಕಾಗಿರುವ ಸಂಜೀವ ಭಂಡಾರಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆರೋಪಿ ಪತ್ತೆಗಾಗಿ ಮೂರು ತಂಡ ರಚಿಸಲಾಗಿದೆ.