ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ನಗರದಲ್ಲಿ ಬುಧವಾರ ಆಟೊದಲ್ಲಿ ಪ್ರಯಾಣಿಸಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಚುನಾವಣಾ ಪ್ರಚಾರ ನಡೆಸಿದರು.
ಇಲ್ಲಿನ ಟಿಳಕ ಚೌಕ, ರಾಮದೇವ ಹೋಟೆಲ್, ಚನ್ನಮ್ಮ ಸರ್ಕಲ್, ಬೋಗಾರ್ ವೇಸ್, ಚಿತ್ರಾ ಟಾಕೀಸ್, ಗಣೇಶಪುರ ಮೊದಲಾದ ಪ್ರದೇಶಗಳಲ್ಲಿರುವ ಆಟೊ ನಿಲ್ದಾಣಗಳಿಗೆ ಭೇಟಿ ನೀಡಿದ ಲಕ್ಷ್ಮಿ; ಚಾಲಕರೊಂದಿಗೆ ಚಹಾ ಕುಡಿದು ಮಾತನಾಡಿದರು. ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಬೆಂಬಲ ನೀಡಬೇಕು ಎಂದು ಕೋರಿದರು.
‘ಬಡ ಕುಟುಂಬಗಳಿಗೆ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಬಾಳು ಬೆಳಗಲು ಕಾಂಗ್ರೆಸ್ ಬಂಬಲಿಸಿ’ ಎಂದರು.
‘ಮೃಣಾಲ್ ನಿಮ್ಮ ಮಧ್ಯೆ ಬೆಳೆದ ಹುಡುಗ. ಅವನು ಸಂಸದನಾದರೆ ನಿಮ್ಮ ಕೈಗೆ ಸಿಗುತ್ತಾನೆ. ನೀವು ಹುಬ್ಬಳ್ಳಿಗೆ ಅಲೆಯುವ ಪ್ರಮೇಯ ಬರುವುದಿಲ್ಲ. ನಾವು ಬೆಳಗಾವಿಯವರು, ಬೆಳಗಾವಿಗರನ್ನು ಬಿಟ್ಟುಕೊಡುವುದಿಲ್ಲ ಎಂಬ ಸ್ವಾಭಿಮಾನ ಪ್ರದರ್ಶಿಸಬೇಕು’ ಎಂದೂ ಹೇಳಿದರು.
ಹೂ ಗುಚ್ಚ ನೀಡಿ ಸ್ವಾಗತಿಸಿದ ಆಟೊ ಚಾಲಕರು, ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ನಮಗೆ ಸಹಾಯ ಮಾಡಿದೆ. ಸ್ಥಳೀಯ ಅಭ್ಯರ್ಥಿಗೇ ನಮ್ಮ ಬೆಂಬಲ’ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಪ್ರಮುಖರು ಸಾಥ್ ನೀಡಿದರು. ಆಟೊ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಪ್ರಚಾರಕ್ಕಾಗಿ ಆಟೊ ರ್ಯಾಲಿ ನಡೆಯಿತು