‘ಶೆಟ್ಟರ್ ಅವರು ಹೊರಗಿನವರು ಎಂಬ ಕಾಂಗ್ರೆಸ್ ಪ್ರಶ್ನೆಗೆ, ಶೆಟ್ಟರ್ ಅವರೇ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯ್ನಾಡಿನಿಂದ ಚುನಾವಣೆಗೆ ಸ್ಪರ್ಧಿಸುವುದನ್ನು ನಾವು ನೋಡುತ್ತಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ಜಾತಿ ಮತ್ತು ಸಮುದಾಯಕ್ಕೆ ಸಂಬಂಧಿತ ವಿಷಯಗಳು ಒಂದಿಷ್ಟು ಪಾತ್ರ ವಹಿಸುತ್ತವೆ. ಆದರೆ, ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಸಮಸ್ಯೆಗಳೇ ಮುಖ್ಯ’ ಎಂದರು.
‘ಶೆಟ್ಟರ್ ಅವರ ಬೆಳಗಾವಿಯ ಮನೆ ವಿಳಾಸ ಎಲ್ಲಿದೆ’ ಎಂದು ಸಚಿವೆ ಹೆಬ್ಬಾಳಕರ್ ಪ್ರಶ್ನಿಸಿದ್ದರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಸುರೇಶ ಅಂಗಡಿಯವರ ಮನೆಯೇ ಶೆಟ್ಟರ್ ಅವರ ವಿಳಾಸ. ಶೆಟ್ಟರ್ ಗೆದ್ದು ಮಂತ್ರಿಯಾದರೆ, ಎಲ್ಲರೂ ಅವರ ಮನೆ ಹುಡುಕಿಕೊಂಡು ಹೋಗುತ್ತಾರೆ’ ಎಂದು ಹೇಳಿದರು.
‘ಲಿಂಗಾಯತ ಪಂಚಮಸಾಲಿ ಸಮುದಾಯ ಕಾಂಗ್ರೆಸ್ನೊಂದಿಗೆ ನಿಲ್ಲುತ್ತದೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಉತ್ತರಿಸಿದ ಜಾರಕಿಹೊಳಿ, ‘ಚುನಾವಣೆ ವೇಳೆ, ಎಲ್ಲರೂ ತಮ್ಮದೇಯಾದ ಹೇಳಿಕೆ ನೀಡುತ್ತಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ 40 ಸೀಟು ಬರುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಹಾಗಾಗಿ ಜನರು ಬಿಜೆಪಿಗೆ ಮತ ಹಾಕುತ್ತಾರೆ’ ಎಂದು ತಿಳಿಸಿದರು.