ಚಿಕ್ಕೋಡಿ: ‘ಶಾಸಕ ರಮೇಶ ಜಾರಕಿಹೊಳಿ ಜೊತೆ ಒಳ್ಳೆಯ ಸಂಬಂಧವಿದೆ. ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ವೈಮನಸ್ಸು ಇಲ್ಲ. ಈ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ಪರವಾಗಿಯೇ ಪ್ರಚಾರ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹೇಳಿದರು.
ತಾಲ್ಲೂಕಿನ ಯಕ್ಸಂಬಾದಲ್ಲಿ ಮಂಗಳವಾರ ಮತ ಚಲಾಯಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಅವರು ಕಾಂಗ್ರೆಸ್ ತೊರೆಯುವ ಕುರಿತು ಎಲ್ಲೂ ಹೇಳಿಲ್ಲ. ಇದು ಕೇವಲ ಮಾಧ್ಯಮದ ಸೃಷ್ಟಿಯಾಗಿದೆ. ಅವರ ನಡೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಅವರು ಪಕ್ಷದಲ್ಲೇ ಇದ್ದರೆ ಬೆಂಬಲ ದೊರೆಯುತ್ತದೆ’ ಎಂದರು.