ಯಲ್ಲಮ್ಮನಗುಡ್ಡ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ, ಬನದ ಹುಣ್ಣಿಮೆ ಜಾತ್ರೆಗೆ ದೇಶದ ವಿವಿಧ ಭಾಗಗಳಿಂದ ಭಕ್ತರ ಮಹಾಪೂರವೇ ಹರಿದುಬಂತು. ಏಳು ಕೊಳ್ಳಗಳು, ಏಳು ಗುಡ್ಡಗಳು ಇರುವ ಈ ಪ್ರದೇಶದಲ್ಲಿ ಉಧೋ ಉಧೋ ಉಧೋ.. ಎಂಬ ಉದ್ಘೋಷ ನಿರಂತರ ಮೊಳಗಿತು.
ನಸುಕಿನ 3ರಿಂದಲೇ ದೇವಿ ದರ್ಶನಕ್ಕೆ ಭಕ್ತರು ಸರದಿ ಸಾಲಿನಲ್ಲಿ ನಿಂತರು. ಹಲವರು ಎರಡು ದಿನ ಮುಂಚಿತವಾಗಿಯೇ ಗುಡ್ಡಕ್ಕೆ ಬಂದು ಠಿಕಾಣಿ ಹೂಡಿದ್ದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳ ಭಕ್ತರು ಗುರುವಾರ ಬಂದು ಕ್ಷೇತ್ರದಲ್ಲಿ ನೆಲೆಯೂರಿದರು.
ಹುಣ್ಣಿಮೆ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಲಂಕಾರ, ದೀಪಾರತಿ, ಉಡಿ ತುಂಬು ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಹೂವು, ಹಣ್ಣು, ಕಾಯಿ, ಭಂಡಾರ, ಬಳೆ, ಮಡಿ ಮುಂತಾದ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಹರಕೆ ತೀರಿಸಿದರು.
ಗುಡ್ಡದಲ್ಲಿ ಎತ್ತ ನೋಡಿದರೂ ಭಕ್ತಿಯ ಪರಾಕಾಷ್ಠೆ ಮನೆ ಮಾಡಿತ್ತು. ಎಲ್ಲೆಲ್ಲೂ ಭಂಡಾರ ಹಾರಾಡಿತು. ರೇಣುಕಾದೇವಿ ಸ್ತುತಿಗಳನ್ನು ಹಾಡುವ ಭಕ್ತರು, ತಮಟೆಗೆ ತಕ್ಕಂತೆ ಕುಣಿದ ಹೆಣ್ಣುಮಕ್ಕಳು, ಗುಡ್ಡದ ಮೂಲೆಮೂಲೆಯಲ್ಲಿ ಕಲ್ಲಿನ ಒಲೆಗಳನ್ನು ಹೂಡಿ ಅಡುಗೆ ಮಾಡುವ ವನಿತೆಯರ ದಂಡೇ ಕಾಣಿಸಿತು. ಬೆಳಗಾವಿ ಹಾಗೂ ನೆರೆ ಜಿಲ್ಲೆಗಳಿಂದ ರೈತರು ಎತ್ತು–ಚಕ್ಕಡಿಗಳನ್ನು ಕಟ್ಟಿಕೊಂಡು ಬಂದು ಸಂಭ್ರಮಿಸಿದರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಬನದ ಹುಣ್ಣಿಮೆ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದರು
– ಪ್ರಜಾವಾಣಿ ಚಿತ್ರ: ಇಮಾಮ್ಹುಸೇನ್ ಗೂಡುನವರ
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಬನದ ಹುಣ್ಣಿಮೆ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದರು