ಎಂ.ಕೆ.ಹುಬ್ಬಳ್ಳಿ: ನೇಗಿನಹಾಳದಲ್ಲಿ ಮೇ 15ರಿಂದ 18ರ ವರೆಗೆ ಸಿದ್ಧಾರೂಢರ ಜಾತ್ರಾ ಮಹೋತ್ಸವ ಹಾಗೂ ತೃತೀಯ ವರ್ಷದ ವೇದಾಂತ್ ಪರಿಷತ್ ಮತ್ತು ಶಿವಾನಂದ ಭಾರತಿ ಸ್ವಾಮೀಜಿ ತುಲಾಭಾರ ಮತ್ತು ಕಿರೀಟ ಮಹಾಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಅದ್ವೈತಾನಂದ ಭಾರತಿ ಸ್ವಾಮೀಜಿ ಹೇಳಿದರು.
ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಸಿದ್ಧಾರೂಢ ಮಠದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಚಲದ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಮೇ 15ರಂದು ಬೆಳಿಗ್ಗೆ ಸಿದ್ದಾರೂಢರ, ಶಾಂಭವಿಯ, ಗಣೇಶ ಮೂರ್ತಿಗಳಿಗೆ ರುದ್ರಾಭಿಷೇಕ, ಸಹಸ್ತ್ರ ಬಿಲ್ವಾರ್ಚನೆ, ಓಂಕಾರ ಪ್ರಣವಧ್ವಜಾರೋಹಣ, ಸಂಜೆ 6ರಿಂದ 10ಗಂಟೆ ವರೆಗೆ ವಿವಿಧ ಪೂಜ್ಯರಿಂದ ಉಪದೇಶಾಮೃತ ಕಾರ್ಯಕ್ರಮ ಹಾಗೂ ಸಂಗೀತ, ಭಜನಾ ಮತ್ತು ಸತ್ಕಾರ ಸಮಾರಂಭ ನಡೆಯಲಿವೆ.
ಮೇ 16ರಂದು ಸಂಜೆ 6ರಿಂದ 10 ಗಂಟೆವರೆಗೆ ಪ್ರವಚನ ಹಾಗೂ ನೀಲಮ್ಮಾ ದುಂ. ದಿವಾಣದ ಹಾಗೂ ಮಕ್ಕಳಿಂದ ಇಂಚಲದ ಶ್ರೀಗಳಿಂದ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ತುಲಾಭಾರ ಕಿರೀಟ ಮಹಾಪೂಜೆ ಹಾಗೂ ತುಲಾಭಾರ ಸೇವೆ ನೆರವೇರುವುದು ಎಂದರು.
ಮೇ 17ರಂದು ಸಿದ್ಧಾರೂಢರ ಪಲ್ಲಕ್ಕಿ ಉತ್ಸವ ಮೆರವಣಿಗೆ,ಪ್ರವಚನ, ಸತ್ಕಾರ ಹಾಗೂ ಮಹಾಪ್ರಸಾದದೊಂದಿಗೆ ಜಾತ್ರಾ ಮಹೋತ್ಸವ ಸಮಾರೋಪಗೊಳ್ಳುವುದು. ಮೇ 18ರಂದು ಸಂಜೆ 8ಗಂಟೆಗೆ ಕೌದಿ ಮಹಾಪೂಜೆ, ಮಠದ ಅದ್ವೈತಾನಂದ ಭಾರತಿ ಸ್ವಾಮೀಜಿಗಳಿಂದ ಪ್ರವಚನ, ಸತ್ಕಾರ ಹಾಗೂ ಮಹಾಪ್ರಸಾದ ನೆರವೇರುವುದು ಎಂದರು.
ಗಂಗಪ್ಪ ಸಂಗೊಳ್ಳಿ, ಸತೀಶ ಕಾರಿಮನಿ, ಮಲ್ಲಯ್ಯ ಹಿರೇಮಠ, ರಾಮಣ್ಣ ತೋರಣಗಟ್ಟಿ, ರಾಚಪ್ಪ ಚಿನ್ನಪ್ಪಗೌಡ್ರ, ಮಹಾದೇವ ಮಡಿವಾಳರ, ಅಶೋಕ ಜೈನರ್, ಉಮೇಶ ಮಾರಿಹಾಳ, ವಿಠ್ಠಲ ಹಾರುಗೊಪ್ಪ, ಅಶೋಕ ಗಾಣಗಿ ಇದ್ದರು.