ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ನಗರದ ಜನಜೀವನ ಶನಿವಾರ ಸಹಜ ಸ್ಥಿತಿಗೆ ಮರಳಿದೆ.
ಸಚಿವರು, ಶಾಸಕರು ಮತ್ತು ಅವರ ಬೆಂಬಲಿಗರ ಓಡಾಟದಿಂದ ಗಿಜಿಗುಡುತ್ತಿದ್ದ ಬೆಳಗಾವಿ, ಈಗ ಶಾಂತವಾಗಿದೆ. ‘ಗಡಿನಾಡ ಶಕ್ತಿಕೇಂದ್ರ’ದ ಆವರಣ ಹಾಗೂ ಪ್ರತಿಭಟನಾ ಸ್ಥಳವೂ ಮೌನವಾಗಿದೆ.
ಸಿಕ್ಕಿದ್ದು ಭರವಸೆಯಷ್ಟೇ: ಪ್ರತಿಬಾರಿಯಂತೆ ಈ ಬಾರಿಯೂ ಸುವರ್ಣ ವಿಧಾಸೌಧ ಬಳಿಯ ಎರಡೂ ವೇದಿಕೆಗಳಲ್ಲಿ ಸರಣಿ ಪ್ರತಿಭಟನೆ ನಡೆದವು. ರೈತರು, ಕಾರ್ಮಿಕರು, ಗುತ್ತಿಗೆದಾರರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇರಿದಂತೆ ವಿವಿಧ ಸಂಘಟನೆಯವರು ಧರಣಿ ನಡೆಸಿದರು. ಆಯಾ ಇಲಾಖೆ ಸಚಿವರು ಸ್ಥಳಕ್ಕಾಗಮಿಸಿ ಬೇಡಿಕೆ ಆಲಿಸಿದರು. ಆದರೆ, ಬಹುತೇಕರಿಗೆ ಸಿಕ್ಕಿದ್ದು ಭರವಸೆಯಷ್ಟೇ. ಹಾಗಾಗಿ, ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಪ್ರತಿಭಟನಾಕಾರರು ಬೇಸರದಿಂದ ತಮ್ಮೂರಿನತ್ತ ಹೆಜ್ಜೆಹಾಕಿದರು.
ವ್ಯಾಪಾರಸ್ಥರಿಗೂ ನಿರಾಸೆ: ಪ್ರತಿಬಾರಿ ಬೆಳಗಾವಿಯ ಅಧಿವೇಶನದಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಈ ಬಾರಿಯೂ ಕಳೆದ ವರ್ಷದಂತೆಯೇ ಪ್ರತಿಭಟನೆಗಳು ಕಂಡುಬಂದರೂ, ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ ಪ್ರತಿಭಟನಾ ಸ್ಥಳಗಳಲ್ಲಿ ಆಹಾರ ಮಳಿಗೆಗಳು, ಜ್ಯೂಸ್ ಸೆಂಟರ್ ತೆರೆದಿದ್ದ ವ್ಯಾಪಾಸ್ಥರಿಗೆ ನಿರಾಸೆಯಾಯಿತು. ಹೆಚ್ಚಿನ ವ್ಯಾಪಾರ–ವಹಿವಾಟು ನಡೆಯಬಹುದೆಂಬ ಅವರ ಲೆಕ್ಕಾಚಾರ ತಲೆಕೆಳಗಾಯಿತು.
ಮುಗಿಬಿದ್ದ ಗ್ರಾಹಕರು: ಅಧಿವೇಶನ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ನಗರದಲ್ಲೇ ಠಿಕಾಣಿ ಹೂಡಿದ್ದ ಸಚಿವರು, ಶಾಸಕರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯದ ಅಧಿಕಾರಿಗಳು, ಪೊಲೀಸರು, ಮಾರ್ಷಲ್ಗಳು ಶುಕ್ರವಾರ ಸಂಜೆಯಿಂದಲೇ ತಮ್ಮೂರಿನತ್ತ ಹೊರಟರು. ಇಲ್ಲಿನ ಕ್ಯಾಂಪ್ ಪ್ರದೇಶ, ಕಾಲೇಜು ರಸ್ತೆ, ಕೇಂದ್ರೀಯ ಬಸ್ ನಿಲ್ದಾಣ ಬಳಿಯಿರುವ ಅಂಗಡಿಗಳಲ್ಲಿ ಮುಗಿಬಿದ್ದು ‘ಕುಂದಾ’, ‘ಕರದಂಟು’ ಖರೀದಿಸಿದರು. ಶನಿವಾರವೂ ಬಹುತೇಕ ಅಂಗಡಿಗಳಲ್ಲಿ ಸಿಹಿಖಾದ್ಯಗಳ ಮಾರಾಟ ಜೋರಾಗಿತ್ತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.