ಮೂಡಲಗಿ(ಬೆಳಗಾವಿ ಜಿಲ್ಲೆ): ಸತತ ಮಳೆಯಿಂದಾಗಿ ತಾಲ್ಲೂಕಿನ ಅವರಾದಿ ಸೇತುವೆ ಮುಳುಗಡೆಯಾಗಿದೆ. ಅಪಾಯದ ಮುನ್ಸೂಚನೆ ಮೀರಿ, ಭಾನುವಾರ ಬೆಳಿಗ್ಗೆ ಈ ಸೇತುವೆ ದಾಟುತ್ತಿದ್ದಾಗ ಟ್ರ್ಯಾಕ್ಟರ್ ಮಗುಚಿ ನದಿಗೆ ಬಿದ್ದಿದೆ.
ಈ ವೇಳೆ, ಘಟಪ್ರಭಾ ನದಿ ನೀರಿನ ಸೆಳವಿಗೆ ಸಿಕ್ಕು ಮುಳುಗುತ್ತಿದ್ದ 10 ಜನರ ಪೈಕಿ 9 ಮಂದಿ ಈಜಿ ದಡ ಸೇರಿದ್ದಾರೆ. ಮತ್ತೊಬ್ಬರಿಗಾಗಿ ಗೋಕಾಕದ ಅಗ್ನಿಶಾಮಕ ಠಾಣೆ ಹಾಗೂ ಎಸ್ಡಿಆರ್ಎಫ್ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ.
‘ಹೆಸ್ಕಾಂ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು, ಎರಡು ಟ್ರ್ಯಾಕ್ಟರ್ಗಳಲ್ಲಿ ಯಾದವಾಡದಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹೋಗುತ್ತಿದ್ದರು. ಸ್ಥಳೀಯರು ಒಂದು ಟ್ರ್ಯಾಕ್ಟರ್ ವಾಪಸ್ ಕಳುಹಿಸಿದ್ದರು. ಇನ್ನೊಂದು ಟ್ರ್ಯಾಕ್ಟರ್
ನವರು ಅಪಾಯದ ಮುನ್ಸೂಚನೆ ಮೀರಿಯೂ ಸೇತುವೆ ದಾಟುತ್ತಿದ್ದಾಗ ಅವಘಡ ಸಂಭವಿಸಿದೆ’ ಎಂದು ಕುಲಗೋಡ ಪಿಎಸ್ಐ ಬಿ.ಆನಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಸೇತುವೆ ಮುಳುಗಡೆಯಾಗಿ ನಾಲ್ಕು ದಿನಗಳಾಯಿತು. ಸಂಚಾರ ನಿರ್ಬಂಧಕ್ಕಾಗಿ ಬ್ಯಾರಿಕೇಡ್ ಅಳವಡಿಸಿದ್ದೆವು. ಆದರೂ, ಕೆಲವರು ಅಪಾಯ ಲೆಕ್ಕಿಸದೆ ಸಂಚರಿಸುತ್ತಿರುವ ಕಾರಣ ಇಂಥ ಅವಘಡ ಸಂಭವಿಸುತ್ತಿದೆ’ ಎಂದು ಅವರು ಹೇಳಿದರು.
ಮರ ಬಿದ್ದು ಇಬ್ಬರ ಸಾವು: ಸತತ ಮಳೆಗೆ ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಬಳಿ ಬಿಜಗರ್ಣಿ ರಸ್ತೆಯಲ್ಲಿ ಮರವೊಂದು ಬೈಕ್ ಮೇಲೆ ಉರುಳಿ ಬಿದ್ದು ಕರ್ಲೆ ಗ್ರಾಮದ ಯುವಕ ಸೋಮನಾಥ ಮುಚ್ಚಂಡಿಕರ(21) ಮತ್ತು ಬಾಲಕ ವಿಠ್ಠಲ ತಳವಾರ(16) ಮೃತಪಟ್ಟಿದ್ದಾರೆ.