ರಾಮದುರ್ಗ: ‘ಮನುಷ್ಯ ಉತ್ಪತ್ತಿ ಮಾಡುವ ತ್ಯಾಜ್ಯಗಳಿಂದ ಭೂ ಮಾಲಿನ್ಯ, ಜಲ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟಾಗಿ ಸಾರ್ವಜನಿಕರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಎಲ್ಲರೂ ಪರಿಸರ ರಕ್ಷಣೆಗೆ ಪುರಸಭೆಯೊಂದಿಗೆ ಸಹಕರಿಸಬೇಕು’ ಎಂದು ದ್ರಾಕ್ಷಾಯಣಿ ಫೌಂಡೇಷನ್ ಅಧ್ಯಕ್ಷ ಬಾಲಚಂದ್ರ ಜಾಬಶೆಟ್ಟಿ ಹೇಳಿದರು.
ಸ್ಥಳೀಯ ಸಿ.ಎಸ್.ಬೆಂಬಳಗಿ ಕಾಲೇಜಿನ ಐಕ್ಯುಎಸಿ ಹಾಗೂ ದ್ರಾಕ್ಷಯಣಿ ಜಾಬಶೆಟ್ಟಿ ಫೌಂಡೇಷನ್ ಆಶ್ರಯದಲ್ಲಿ ಸ್ಥಿರ ಅಭಿವೃದ್ಧಿ, ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮತ್ತು ಆರೋಗ್ಯ ವಿಷಯದ ಕಾರ್ಯಾಗಾರದಲ್ಲಿ ಮಾತನಾಡಿದರು.
‘ವಿದ್ಯಾರ್ಥಿಗಳು ಘನ, ದ್ರವ ಮತ್ತು ಒಣ ತ್ಯಾಜ್ಯಗಳ ವಿಲೇವಾರಿಯನ್ನು ತಮ್ಮ ಮನೆಯಿಂದಲೇ ಆರಂಭಿಸಿ ಪರಿಸರ ರಕ್ಷಣೆಯ ಜೊತೆಗೆ ಸಾರ್ವಜನಿಕ ಆರೋಗ್ಯ ಕಾಪಾಡಬೇಕು’ ಎಂದು ತಿಳಿಸಿದರು.
‘ಪ್ಲಾಸ್ಟಿಕ್ ಮತ್ತು ಒಣ ಕಸವನ್ನು ಮಾತ್ರ ಪುರಸಭೆಗೆ ನೀಡಬೇಕು. ಉಳಿದ ತ್ಯಾಜ್ಯಗಳನ್ನು ಸಂಸ್ಕರಿಸಿ ಗೊಬ್ಬರ ತಯಾರಿಸಿದರೆ ದೇಶದ ಬೆನ್ನುಬು ಎನ್ನುವ ರೈತರಿಗೆ ಅನುಕೂಲ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುತುವರ್ಜಿ ವಹಿಸಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಟಿ. ದಾಮೋದರ ಮಾತನಾಡಿದರು. ಪ್ರಾಚಾರ್ಯ ಎಸ್.ಎಂ. ಸಕ್ರಿ, ಐಕ್ಯುಎಸಿ ಸಂಚಾಲಕ ಪ್ರೊ. ಪ್ರಕಾಶ ತೆಗ್ಗಿಹಳ್ಳಿ, ಡಾ. ವರ್ಷಾರಾಣಿ ಜಬಡೆ, 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.