ಬೆಳಗಾವಿ: ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬೆಳಗಾವಿಯು ಈ ಭಾಗದ ಹೋರಾಟದ ಕೇಂದ್ರ ಹಾಗೂ ಮೂಲ ನೆಲೆಯಾಗಿತ್ತು ಎಂದು ಪ್ರೊ. ಶ್ರೀಕಾಂತ ಶಾನವಾಡ ಅಭಿಪ್ರಾಯಪಟ್ಟರು.ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ~ ಕುರಿತು ಅವರು ಉಪನ್ಯಾಸ ನೀಡಿದರು.
ರಾಣಿ ಚೆನ್ನಮ್ಮ ಹೋರಾಟ, ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ ಸೇರಿದಂತೆ ಹಲವಾರು ಮಹತ್ವದ ಘಟನೆಗಳು ಇಲ್ಲಿ ನಡೆದಿವೆ. ಜಿಲ್ಲೆಯ ಸಾವಿರಾರು ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು~ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ಎಲ್. ಪಾಟೀಲ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಇತಿಹಾಸದ ಮಹತ್ವ ತಿಳಿಸಿಕೊಡುವಂಥ ಬೋಧಕರು ಇರಬೇಕು. ಕೇವಲ ಇತಿಹಾಸವನ್ನು ಬೋಧಿಸುವವರಾಗದೇ ಮತ್ತೊಂದು ಇತಿಹಾಸ ನಿರ್ಮಿಸುವಂತವರಾಗಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ವ್ಯವಸ್ಥಾಪಕ ಕೆ.ಬಿ. ಕುರಿ, ಉಪನ್ಯಾಸಕಿ ಎಸ್.ಎ. ಚೌಗಲೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಮಾವೇಶ ಉದ್ಘಾಟನೆ ಇಂದು
ಬೆಳಗಾವಿಯ ನೆಹರು ಯುವ ಕೇಂದ್ರದ ವತಿಯಿಂದ ಇದೇ 22 ರಂದು ಬೆಳಿಗ್ಗೆ 10 ಕ್ಕೆ ಮಹೇಶ್ವರ ಅಂಧ ಮಕ್ಕಳ ಶಾಲೆಯಲ್ಲಿ ಜಿಲ್ಲಾ ಯುವ ಸಮಾವೇಶ ಹಾಗೂ ಯುವಕ, ಯುವತಿ ಮಂಡಳಗಳಿಗೆ ಆಟದ ಸಾಮಗ್ರಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸದ ಸುರೇಶ ಅಂಗಡಿ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಜಿ.ಪಂ. ಸಿಇಓ ಡಾ. ಅಜಯ್ ನಾಗಭೂಷಣ, ವಾರ್ತಾ ಇಲಾಖೆ ಉಪನಿರ್ದೇಶಕ ಬಸವರಾಜ ಕಂಬಿ, ಅಂಧ ಮಕ್ಕಳ ಶಾಲೆ ಪ್ರಾಚಾರ್ಯೆ ವೈಜಯಂತಿ ಚೌಗಲಾ ಆಗಮಿಸಲಿದ್ದಾರೆ.
ಶಾಸಕ ಫಿರೋಜ್ ಸೇಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.