ಬೆಳಗಾವಿ: ‘ಚಿತ್ರನಟ ಕಿಚ್ಚ ಸುದೀಪ್ ಅವರನ್ನು ನೋಡಲೇಬೇಕು, ಇಲ್ಲವಾದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಯುವಕರಿಬ್ಬರು ಪೆಟ್ರೋಲ್ ಬಾಟಲಿಗಳ ಸಮೇತ ಬಂದು ಹುಚ್ಚಾಟವಾಡಿದ ಘಟನೆ ಇಲ್ಲಿನ ರಾಣಿ ಚನ್ನಮ್ಮ ವೃತ್ತದ ಸಮೀಪ ಬುಧವಾರ ನಡೆದಿದೆ.
ಸುದೀಪ್ ಅಭಿಮಾನಿಗಳು ಎನ್ನಲಾದ, ತಾಲ್ಲೂಕಿನ ಭೂತರಾಮನಹಟ್ಟಿಯ ಸಚಿನ್ ಪಾಟೀಲ ಹಾಗೂ ಪ್ರವೀಣ ಪಾಟೀಲ ಎಂಬ ಯುವಕರಿಬ್ಬರು ಇಂಥ ಅಂಧಾಭಿಮಾನ ಪ್ರದರ್ಶಿಸಿ, ನೆರೆದಿದ್ದ ಸಾರ್ವಜನಿಕರ ಗೇಲಿಗೆ ಒಳಗಾದರು. ಗುರುವಾರದಿಂದ ಆರಂಭವಾಗುವ ದ್ವಿತೀಯ ಪಿಯು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಬಿಟ್ಟು, ಸುದೀಪ್ ನೋಡಬೇಕು ಎಂದು ಪಟ್ಟು ಹಿಡಿದಿದ್ದ ಅವರಿಗೆ ಪೊಲೀಸರು ಬುದ್ಧಿವಾದ ಹೇಳಿದರು.
ಈ ಯುವಕರು ಆತ್ಮಹತ್ಯೆ ಮಾಡಿಕೊಳ್ಳಲೆಂದು ಬೆಂಕಿಕಡ್ಡಿ ಪೊಟ್ಟಣ ಹಾಗೂ ಬಾಟಲಿಗಳಲ್ಲಿ ಪೆಟ್ರೋಲ್ ತಂದಿದ್ದರು. ಇದನ್ನು ಮಾಧ್ಯಮದವರು ಹಾಗೂ ಪೊಲೀಸರು ಗಮನಿಸಿದ್ದರಿಂದ ಅವರ ಉದ್ದೇಶ ಬೆಳಕಿಗೆ ಬಂದಿತು. ಎದೆಯ ಮೇಲೆ ‘ಕಿಚ್ಚ ಸುದೀಪ’ ಎಂದು ಬರೆಸಿಕೊಂಡಿದ್ದನ್ನು ತೋರಿಸಿದ ಸಚಿನ್, ‘ನಾನು ಸುದೀಪ್ ಅವರ ದೊಡ್ಡ ಅಭಿಮಾನಿ. ಅವರನ್ನು ನೋಡಲೇಬೇಕು.
ಇಲ್ಲವಾದಲ್ಲಿ ಬದುಕುವುದಿಲ್ಲ. ನನಗೆ ಪರೀಕ್ಷೆ ಮುಖ್ಯವಲ್ಲ. ಸುದೀಪ್ ಭೇಟಿಯಾಗುವುದು ಮುಖ್ಯ’ ಎಂದು ಪಟ್ಟು ಹಿಡಿದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಅವರಿಂದ ಪೆಟ್ರೋಲ್ ಬಾಟಲಿ ಹಾಗೂ ಬೆಂಕಿಕಡ್ಡಿ ಪೊಟ್ಟಣ ವಶಕ್ಕೆ ಪಡೆದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಡಿಸಿಪಿ ಜಿ. ರಾಧಿಕಾ ಕೂಡ ಯುವಕರಿಗೆ ತಿಳಿಸಿ ಹೇಳಿದರು. ಅವರನ್ನು ಆಪ್ತಸಮಾಲೋಚನೆಗೆ ಒಳಪಡಿಸುವಂತೆ ಪೊಲೀಸರಿಗೆ ಸೂಚಿಸಿದರು.
ಸುದೀಪ್ ಬಾರದೇ ಭ್ರಮನಿರಸನ
‘ಹೆಬ್ಬುಲಿ ಚಲನಚಿತ್ರದ ಪ್ರಚಾರಕ್ಕಾಗಿ ರಾಜ್ಯದ ವಿವಿಧೆಡೆ ಸಂಚರಿಸುತ್ತಿರುವ ಸುದೀಪ್, ಬೆಳಗಾವಿಗೂ ಬರುತ್ತಾರೆ ಎಂದು ಭಾವಿಸಿದ್ದ ಇವರು, ‘ಹೆಬ್ಬುಲಿ’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳ ಬಳಿ ಎರಡು ದಿನಗಳಿಂದಲೂ ಅಲೆದಾಡಿದ್ದಾರೆ. ಹುಬ್ಬಳ್ಳಿ ನಂತರ ಬೆಳಗಾವಿಗೆ ಸುದೀಪ್ ಬರುತ್ತಾರೆಂದು ತಿಳಿದಿದ್ದರು.
ಅದರೆ, ಸುದೀಪ್ ಬರುವ ಲಕ್ಷಣ ಕಾಣಲಿಲ್ಲವಾದ್ದರಿಂದ, ಭ್ರಮನಿರಸನಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಕನ್ನಡ ಸಾಹಿತ್ಯ ಭವನದ ಬಳಿ ಅವರನ್ನು ವಶಕ್ಕೆ ಪಡೆದು ಬುದ್ಧಿವಾದ ಹೇಳಲಾಯಿತು. ನಂತರ ಕೌನ್ಸೆಲಿಂಗ್ ನಡೆಸಲಾಗಿದೆ. ಸಾಧ್ಯವಾದರೆ, ಸುದೀಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತ ನಾಡಿಸಿ ಸಮಾಧಾನಪಡಿಸಿ, ಪೋಷಕರೊಂದಿಗೆ ಮನೆಗೆ ಕಳುಹಿಸಲಾಗುವುದು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಖಡೇಬಜಾರ್ ಠಾಣೆ ಪೊಲೀಸರು ತಿಳಿಸಿದರು.