ಚಿಕ್ಕೋಡಿ: ತಾಲ್ಲೂಕಿನ ಕಾರದಗಾ, ಬಾರವಾಡ ಮತ್ತು ಮಾಂಗೂರ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕಾರು ದಿನಗಳಲ್ಲಿ ನೂರಾರು ಮೀನು ಹಾಗೂ ಜಲಚರಗಳು ಮೃತಪಟ್ಟಿವೆ.
ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಸಕ್ಕರೆ ಕಾರ್ಖಾನೆಯೊಂದು ನದಿಗೆ ಕಲುಷಿತ ನೀರು ಹರಿ ಬಿಡುತ್ತಿರುವ ಕಾರಣದಿಂದ ನದಿ ನೀರು ಮಲೀನಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ನದಿ ತೀರದಲ್ಲಿ ಸತ್ತಿರುವ ಮೀನುಗಳು ತೇಲಿ ಬರುತ್ತಿರುವುದರಿಂದ ಕೆಟ್ಟವಾಸನೆ ಬರುತ್ತಿದೆ. ಪ್ರತಿ ವರ್ಷ ಕಬ್ಬು ನುರಿಸುವ ಹಂಗಾಮಿನಲ್ಲಿ ನದಿ ನೀರು ಕಲುಷಿತಗೊಂಡು ಜಲಚರಗಳು ಸಾವಿಗೀಡಾಗುತ್ತಿವೆ. ಸರ್ಕಾರ ಇದರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಉಗಳೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳು ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಪಡೆದಿದ್ದಾರೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನದಿ ನೀರನ್ನು ನೇರವಾಗಿ ಕುಡಿಯದಂತೆ ಕ್ರಮ ಕೈಗೊಳ್ಳಲಾಗಿದೆ.
‘ತಾಲ್ಲೂಕಿನ ಹತ್ತಾರು ಗ್ರಾಮಗಳ ಜಲಮೂಲವಾಗಿರುವ ದೂಧಗಂಗಾ ನದಿ ನೀರು ಪ್ರತಿ ವರ್ಷ ಕಲುಷಿತವಾಗುತ್ತಿದೆ. ಜಲಚರಗಳು ಮೃತಪಡುತ್ತಿವೆ. ಜೊತೆಗೆ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯೂ ಉಂಟಾಗುತ್ತದೆ. ನದಿ ನೀರಿಗೆ ಎಲ್ಲಿಂದ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಉಗಳೆ ಆಗ್ರಹಿಸಿದ್ದಾರೆ.