ಮೋಳೆ: ದೇಶದಲ್ಲಿರುವ ಭ್ರಷ್ಟಾಚಾರ ತೊಲಗಲಿ ಎಂಬ ಸಂಕಲ್ಪ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೋಟುಗಳ ಚಲಾವಣೆ ರದ್ದುಗೊಳಿಸಿದ್ದಾರೆ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಹೇಳಿದರು.
ಕಾಗವಾಡ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಮೆರಿಕ ಮತ್ತು ಫ್ರಾನ್ಸ್ ದೇಶದಂತೆ ಇಲ್ಲಿ ಅಭಿವೃದ್ಧಿಯಾಗಬೇಕಾದರೆ ಮೊದಲು ದೇಶದ ಪ್ರತಿ ಕ್ಷೇತ್ರದಲ್ಲಿರುವ ಭ್ರಷ್ಟಾಚಾರವನ್ನು ಬೇರು ಸಹಿತ ತೆಗೆದುಹಾಕುವುದೇ ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ’ ಎಂದು ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನೋಟು ನಿಷೇಧ ನಿರ್ಧಾರವನ್ನು ದೇಶದ 125 ಕೋಟಿ ಜನ ಒಪ್ಪಿಕೊಂಡಿದ್ದಾರೆ. ಆದರೆ, ವಿರೋಧ ಪಕ್ಷದವರು ಮಾತ್ರ ವಿರೋಧಿಸುತ್ತಿರುವುದು ದುರಂತ ಎಂದು ಹೇಳಿದರು.
70 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದೆ. ದೇಶದ ಜನರ ಬಗ್ಗೆ ಎಂದೂ ಕಾಳಜಿ ಮಾಡಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ವರ್ಷದಲ್ಲೇ ದೇಶದ ಅಭಿವೃದ್ಧಿ ಸಂಕಲ್ಪ ಮಾಡಿದರು. ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಹಲವು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ವಿವರಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಸುಶೀಲಕುಮಾರ ಪತ್ತಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಅಜೀತ ಚೌಗುಲೆ, ಮುಖಂಡರಾದ ಶಿವಾನಂದ ಸವದಿ, ನಿಂಗಪ್ಪ ಖೋಕಲೆ, ಶ್ರೀಶೈಲ ನಾಯಿಕ, ಶಿವರುದ್ರ ಗುಳಪ್ಪನವರ, ಎ.ಜಿ. ಹಳ್ಳಿ, ಗಿರೀಶ ಸಜ್ಜನ, ಅರುಣ ಬಾಸಿಂಗೆ, ಕಾಕಾ ಪಾಟೀಲ, ವಿಲಾಸ ಮಿರ್ಜಿ, ಅನೀಲ ನಾವಲಿಗೇರ, ಯೋಗೇಶ ಕುಂಬಾರ, ಸಂಜಯ ಮುಕುಂದ ಉಪಸ್ಥಿತರಿದ್ದರು.