ಹುಕ್ಕೇರಿ: ‘ಪಕ್ಷಾತೀತವಾಗಿ ನನ್ನನ್ನು 7 ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಕಳೆದ 32 ವರ್ಷಗಳಿಂದ ನಾನು ಜನರ ಋಣ ತೀರಿಸಲು ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ದುಡಿದಿದ್ದೇನೆ. ಇನ್ನೂ ಸಾಕಷ್ಟು ಕೆಲಸ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಈ ಬಾರಿಯೂ ನನ್ನನ್ನು ಆಶೀರ್ವದಿಸಿ ಗೆಲ್ಲಿಸಿರಿ’ ಎಂದು ಶಾಸಕ ಉಮೇಶ ಕತ್ತಿ ಮತದಾರರಲ್ಲಿ ವಿನಂತಿಸಿದರು.
ಅವರು ಸ್ಥಳೀಯ ವಿಶ್ವರಾಜ ಭವನದಲ್ಲಿ ಏರ್ಪಡಿಸಿದ್ದ ನವಶಕ್ತಿ ಸಮಾವೇಶ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ‘ಕ್ಷೇತ್ರದ ಎಲ್ಲ ಭಾಗವನ್ನು ನೀರಾವರಿಗೆ ಒಳಪಡಿಸಬೇಕು ಎಂಬ ಯೋಜನೆ ನನ್ನದಾಗಿದೆ. ಹಿರಣ್ಯಕೇಶಿ ನದಿ ತಟದಲ್ಲಿರುವ ಎಲ್ಲ ಗ್ರಾಮ ಮತ್ತು ಪಟ್ಟಣಗಳ ಕೃಷಿ ಜಮೀನಿಗೆ ಏತ ನೀರಾವರಿ ಮತ್ತು ಬ್ರಿಜ್ ಕಮ್ ಬಾಂದಾರ ನಿರ್ಮಾಣ ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಹೇಳಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಪಕ್ಷದ ಉಸ್ತುವಾರಿ ಈರಪ್ಪಾ ಕಡಾಡಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಚೇರಮನ್ ಮಹಾವೀರ ನಿಲಜಗಿ, ವಕೀಲ ಪ್ರಕಾಶ ಮುತಾಲಿಕ, ಸಂಕೇಶ್ವರ ಪುರಸಭೆ ಮಾಜಿ ಅಧ್ಯಕ್ಷ ಅಮರ ನಲವಡೆ ಮಾತನಾಡಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ವಿವರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಹೀರಾ ಶುಗರ್ಸ್ ಅಧ್ಯಕ್ಷ ಅಪ್ಪಾಸಾಬ ಶಿರಕೋಳಿ, ಬಸವರಾಜ ಮಟಗಾರ, ರವೀಂದ್ರ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯ ನಿಖಿಲ್ ಕತ್ತಿ, ಮುಖಂಡರಾದ ಬಸವರಾಜ ಮರಡಿ, ಪ್ರಶಾಂತ ಪಾಟೀಲ, ಸುನೀಲ ಪರ್ವತರಾವ್ ಇದ್ದರು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ ಕುಲಕರ್ಣಿ ನಿರೂಪಿಸಿದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೆಶಕ ಅಶೋಕ ಪಟ್ಟಣಶೆಟ್ಟಿ ವಂದಿಸಿದರು.