ಬೈಲಹೊಂಗಲ: ಪಟ್ಟಣದ ಪ್ರತಿಷ್ಠಿತ ಢಮ್ಮಣಗಿ ಶಿಕ್ಷಣ ಸಂಸ್ಥೆಯ ಕಲ್ಪವೃಕ್ಷ ಮಾದರಿ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ಬಾರಿಯೂ ಮನೆ, ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ ಅನಾಥಾಶ್ರಮಗಳಿಗೆ ವಿತರಿಸಿದರು.
ನೊಂದವರಿಗೆ ಆಸರೆಯಾಗುವ ನಿಟ್ಟಿನಲ್ಲಿ ವಿನೂತನ ಕಾರ್ಯ ನಡೆಸುತ್ತಿರುವುದು ಸಾರ್ವಜನಿಕ ಮೆಚ್ಚುಗೆ ಪಡೆಯಿತು. ಮನೆ ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯೋದ್ದೇಶವನ್ನು ಸಾರ್ವಜನಿಕರಿಗೆ ತಿಳಿಹೇಳಿ ಅಕ್ಕಿ ಸಂಗ್ರಹಿಸಿದರು.
ಶಾಲೆಯ ಪ್ರಾಚಾರ್ಯ ಅರಿಂಧಮ್ ರಾಯ್ ಚೌಧರಿ ಮಾತನಾಡಿ, ‘ಅಧ್ಯಯನದ ಜೊತೆಗೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬೋಧಿಸಲು ಕಲ್ಪವೃಕ್ಷ ಮಾದರಿ ಶಾಲೆ ವಿದ್ಯಾರ್ಥಿಗಳ ತಂಡ ರಚಿಸಿ ಪ್ರತಿಯೊಂದು ಮನೆ, ಮನೆಗಳಿಗೆ ತೆರಳಿ ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ಅಕ್ಕಿಯನ್ನು ಅನಾಥ ಮಕ್ಕಳಿಗೆ, ವೃದ್ಧಾಶ್ರಮ, ಪುನರ್ವಸತಿ ಕೇಂದ್ರಗಳಿಗೆ, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯವನ್ನು ಶಾಲೆ ರೂಪಿಸುತ್ತಿದೆ’ ಎಂದರು.
ಶಿಕ್ಷಕಿಯರಾದ ಪಲ್ಲವಿ, ದೀಪಾ, ಶೋಭಾ, ವಿದ್ಯಾರ್ಥಿಗಳಾದ ಪ್ರಥಮ ತುರಮರಿ, ಬಸವರಾಜ ದಂಡಿನ, ಚಿರಾಗ ಮೆಟಗುಡ್ಡ, ಸುಮಂತ ಸನಮನಿ, ಆದರ್ಶ ತುಬಾಕಿ, ಅಪ್ಪು ಪಾಟೀಲ ಮತ್ತಿತರರು ಭಾಗವಹಿಸಿದ್ದರು.