ಅಥಣಿ : ಜೆ.ಇ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಕ್ಷ ಸೂರ್ಯ ನಮಸ್ಕಾರ ಯಜ್ಞ ಹಾಗೂ ಪ್ರಾಣಾಯಾಮ ಶಿಬಿರಗಳ ಸಮಾರೋಪ ಸಮಾರಂಭ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಡಾ.ರಾಮ ಕುಲಕರ್ಣಿ ಮಾತನಾಡಿ, ಮಾನಸಿಕ ಒತ್ತಡ ಮತ್ತು ವಯೋಮಾನ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಯೋಗ ಪ್ರಾಣಾ ಯಾಮ ಮತ್ತು ಸೂರ್ಯನಮಸ್ಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಡಾ.ಮಹೇಶ ಕೋರಣಮಠ ಮಾತನಾಡಿ ಕಳೆದ 8 ದಶಕಗಳಿಂದ ಜೆ.ಇ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಪ್ರಯೋಜನವಾಗಿದೆ ಎಂದರು.
ಈ ವೇಳೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎನ್.ಚಂದ್ರಶೇಖರ ಮತ್ತು ಬೋಧಕೇತರ ಸಿಬ್ಬಂಧಿ ಎಸ್.ಜೆ ಪವಾರ ಅವರನ್ನು ಸತ್ಕರಿಸಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಸ್ವಾಗತಿಸಿದರು. ಶಿವರಾಜ ಇಂಗಳಗಿ ಮತ್ತು ಅಥರ್ವ ದೇಶಪಾಂಡೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಾಮನ ಕುಲಕರ್ಣಿ ಪರಿಚಯಿಸಿದರು. ಪಿ.ಎಮ್ ಹುಲಗಬಾಳಿ ನಿರೂಪಿಸಿದರು. ಎಸ್.ವಿ ಜೋಶಿ ವಂದಿಸಿದರು.