‘ದೂರಿನ ವಿಚಾರಣೆ ಮುಂದುವರಿಸಲು ಸಕ್ಷಮ ಪ್ರಾಧಿಕಾರದಿಂದ ಪ್ರಾಥಮಿಕ ವಿಚಾರಣೆಗೆ ಅನುಮತಿ ಪಡೆಯುವುದು ಅವಶ್ಯವಿದ್ದು, ಕುಟುಕು ಕಾರ್ಯಾಚರಣೆಯ (ವಾಹಿನಿಯೊಂದು ನಡೆಸಿದ್ದ) ಮೂಲ ದೃಶ್ಯವನ್ನು 3 ದಿನಗಳಲ್ಲಿ ಕೊಡುವಂತೆ ಎಸಿಬಿ ಅಧಿಕಾರಿಗಳು ಜುಲೈ 29ರಂದು ನೋಟಿಸ್ ಕೂಡ ನೀಡಿದ್ದರು. ಆ ಪ್ರಕಾರ ಮೂಲ ದೃಶ್ಯ ನೀಡಿದ ನಂತರ ಸೆ.1ರಂದು ನೋಟಿಸ್ ಕೊಟ್ಟು, ವಿವರಣೆ ನೀಡಲು ಮತ್ತು ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದ್ದರು. ಆದರೆ, ಹಗರಣದಲ್ಲಿ ಭಾಗಿಯಾದ ಆರೋಪಿಗಳಾದ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರ ಮೇಲೆ ಪ್ರಕರಣ ದಾಖಲಿಸಿಲ್ಲ. ಆರೋಪಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಎಫ್ಐಆರ್ ದಾಖಲಿಸದೆ ತಪ್ಪು ಎಸಗಿದ್ದಾರೆ. ಹೀಗಾಗಿ, ಕಲಂ 166ರ ಎ ಪ್ರಕಾರ ಎಸಿಬಿ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.