ಹೊಸಪೇಟೆ: ಸೇವಾ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವರು ನಗರದ ಶಂಕರ್ ಆನಂದ್ ಸಿಂಗ್ ಕಾಲೇಜು ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದೆ.
‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರೂ ಸೇವಾ ಭದ್ರತೆ ಇಲ್ಲ.ಆಯಾ ತಿಂಗಳು ಸಂಬಳ ಪಾವತಿಸುತ್ತಿಲ್ಲ.ಪ್ರತಿ ತಿಂಗಳು ವೇತನ ಕೊಡಬೇಕು. ಮಾಸಿಕ ₹25,000 ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಪ್ರಸಕ್ತ ಸಾಲಿನ ಮೊದಲನೇ ತಿಂಗಳಿನಿಂದ ಅನ್ವಯವಾಗುವಂತೆ ₹5,000 ವೇತನ ಹೆಚ್ಚಿಸಬೇಕು. ಬರುವ ದಿನಗಳಲ್ಲಿ ಯು.ಜಿ.ಸಿ. ನಿಯಮದ ಪ್ರಕಾರ ಸಂಬಳ ಕೊಡಬೇಕು. ಪದವಿ ಕಾಲೇಜುಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಮೊದಲ ಆದ್ಯತೆ ಕೊಡಬೇಕು’ ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಬಿ. ಕುಮಾರ, ಜಂಟಿ ಕಾರ್ಯದರ್ಶಿಗಳಾದ ಅಕ್ಕಿ ಮಲ್ಲಿಕಾರ್ಜುನ, ದೀಪಕ್ ನವಲೆ, ಉಪಾಧ್ಯಕ್ಷ ಷಣ್ಮುಖಪ್ಪ, ಸಂಚಾಲಕ ಚನ್ನಪ್ಪ, ಅತಿಥಿ ಉಪನ್ಯಾಸಕರಾದ ವಿಜಯಕುಮಾರ, ಟಿ. ಬಸವರಾಜ, ಮಂಜುನಾಥ, ಉಜ್ಜಪ್ಪ, ಗಿರಿಜಾ, ಕುಸುಮಾ ಇದ್ದರು.