ಬೆಂಗಳೂರು: ಕೆ.ಆರ್.ಪುರದ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊಂಗಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ನೃತ್ಯ, ಹಾಡುಗಾರಿಕೆ ಹಾಗೂ ನಾಟಕ ಪ್ರದರ್ಶನ ನೀಡಿದರು.
ಸೂರ್ಯಾಸ್ತದ ಬಳಿಕ ಆವರಿಸುವ ಕತ್ತಲೆಯನ್ನು ದೂರವಾಗಿಸಲು ಮನುಷ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಆದರೆ, ಮಾನಸಿಕ ಕತ್ತಲೆಯನ್ನು ದೂರವಾಗಿಸಲು ಜ್ಞಾನದಿಂದ ಮಾತ್ರ ಸಾಧ್ಯ. ಶಿಕ್ಷಣ ಸಂಸ್ಥೆಗಳು ಆ ಕೆಲಸವನ್ನು ಮಾಡುತ್ತಿವೆ ಎಂದು ಲೇಖಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ತಿಳಿಸಿದರು.
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಲೀಂ ಪಾಷಾ, ‘ಮಕ್ಕಳಿಗೆ ಕಾಸ್ಮೊಪಾಲಿಟನ್ ಸಂಸ್ಕೃತಿಯನ್ನು ಕಲಿಸಲು ಪೋಷಕರು ಮುಂದಾಗಿದ್ದಾರೆ. ಇದರಿಂದ ದೇಶೀ ಸಂಸ್ಕೃತಿಗೆ ಧಕ್ಕೆ ಉಂಟಾಗಲಿದೆ. ಮಕ್ಕಳು ಭಾರತೀಯ ಸಂಸ್ಕೃತಿಯನ್ನು ಅನುಸರಿಸುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.