ಬೆಂಗಳೂರು: ಹೆಸರಘಟ್ಟದ ನಾಡ ಕಚೇರಿ ಅಧಿಕಾರಿಗಳು ಸಕಾಲದಲ್ಲಿ ಕೆಲಸಗಳನ್ನು ಮಾಡಿಕೊಡದೆ, ಅಲೆದಾಡಿಸುತ್ತಿದ್ದಾರೆ. ಹಾಗಾಗಿ ಕಚೇರಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
2012ರಲ್ಲಿ ನಿರ್ಮಿಸಿದ್ದ ಸಮುದಾಯ ಭವನದಲ್ಲಿ ನಾಡಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಯಿತು. 2015 ರಿಂದ ಕಚೇರಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಹೆಸರಘಟ್ಟದ ಎಂಟು ಗ್ರಾಮ ಪಂಚಾಯಿತಿಯ ಜನ ತಮ್ಮ ಖಾತೆ, ಪಹಣಿ ಮಾಡಿಸಿಕೊಳ್ಳಲು ಬರುತ್ತಾರೆ.
‘ಸಣ್ಣ ಕಾರಣಗಳನ್ನು ಹೇಳಿ ಅಧಿಕಾರಿಗಳು ಅಲೆದಾಡಿಸುತ್ತಾರೆ. ಅಲ್ಲದೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ’ ಎಂದು ಹುರುಳಿ ಚಿಕ್ಕನಹಳ್ಳಿಯ ರೈತ ಬಸವರಾಜು ಆರೋಪಿಸಿದರು.
‘ಕಟ್ಟಡಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಒತ್ತಾಯಿಸಿದರೆ, ಸರ್ಕಾರದಿಂದ ಆದೇಶ ಬಂದರೇ ಮಾತ್ರ ಅಳವಡಿಸುತ್ತೇವೆ ಎಂದು ಅಧಿಕಾರಿಗಳು ದರ್ಪದಿಂದ ಮಾತನಾಡುತ್ತಾರೆ’ ಎಂದು ಗ್ರಾಮಸ್ಥರು ದೂರಿದರು.
ಹೊಸಹಳ್ಳಿ ಪಾಳ್ಯದ ರಘು ಎಂಬುವವರು ಪಹಣಿ ಮಾಡಿಸಲು 15 ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ‘ಪಹಣಿ ಮಾಡುವ ಅಧಿಕಾರಿ ಹೇಮಂತ್, ಪ್ರತಿ ಬಾರಿ ಬಂದಾಗಲೂ ತಾಂತ್ರಿಕ ದೋಷ ಇದೆ ಎಂದು ನೆಪ ಹೇಳುತ್ತಾರೆ. ಕಚೇರಿ ವೇಳೆ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ’ ಎಂದರು.
ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಯ್ಯ, ‘ನಾಡಕಚೇರಿಗೆ ಸಿ.ಸಿ.ಟಿ.ವಿ. ಕ್ಯಾಮಾರ ಅಳವಡಿಸಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದೇವೆ. ಇಲ್ಲಿತನಕ ಅಧಿಕಾರಿಗಳು ಅದಕ್ಕೆ ಸ್ಪಂದಿಸಿಲ್ಲ’ ಎಂದು ಹೇಳಿದರು.
* ಯಾವ ನಾಡಕಚೇರಿಯಲ್ಲಿಯೂ ಸಿ.ಸಿ.ಟಿ.ವಿ. ಕ್ಯಾಮೆರಾ ಇಲ್ಲ. ಅಳವಡಿಸುವ ಯೋಜನೆ ಇದೆ. ಅದಕ್ಕಾಗಿ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ