ಬೆಂಗಳೂರು: ಮಾರತ್ತಹಳ್ಳಿ ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಪತ್ರಿಕಾ ವಿತರಕ ವೆಂಕಟ ರಮಣಪ್ಪ (42) ಎಂಬುವರು ಮೃತಪಟ್ಟಿದ್ದಾರೆ.
ಮೇಡಹಳ್ಳಿ ನಿವಾಸಿಯಾದ ವೆಂಕಟರಮಣಪ್ಪ, 22 ವರ್ಷಗಳಿಂದ ಪತ್ರಿಕಾ ವಿತರಕರಾಗಿತ್ತಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
‘ಪತ್ರಿಕೆಗಳನ್ನು ತಂದು ಮನೆಗೆ ಹಂಚಿಕೆ ಮಾಡಲೆಂದು ವೆಂಕಟರಮಣಪ್ಪ, ಬೆಳಿಗ್ಗೆ 5.15ರ ಸುಮಾರಿಗೆ ಮೇಡಹಳ್ಳಿಯಿಂದ ಮಾರತ್ತಹಳ್ಳಿಯತ್ತ ಬೈಕ್ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಅವರ ಬೈಕ್ಗೆ ಗುದ್ದಿತ್ತು’ ಎಂದು ಕೆ.ಆರ್.ಪುರ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಸ್ಥಳದಲ್ಲೇ ಕುಸಿದು ಬಿದ್ದಿದ್ದ ವೆಂಕಟರಮಣಪ್ಪ ಅವರ ಮೇಲೆಯೇ ವಾಹನದ ಚಕ್ರ ಹರಿದು ಹೋಗಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದೂ ಮಾಹಿತಿ ನೀಡಿದರು.
‘ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿದರು.