ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಠಾಣೆಗೆ ಬಂದ ಏಳು ನಿಮಿಷದೊಳಗೆ ಆದಿಲ್‌ ಸಾವು: ಜಿ.ಪರಮೇಶ್ವರ

Published 25 ಮೇ 2024, 15:24 IST
Last Updated 25 ಮೇ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಿಲ್‌ ಎಂಬ ಯುವಕನನ್ನು ಪ್ರಕರಣವೊಂದರ ಸಂಬಂಧ ವಿಚಾರಣೆಗಾಗಿ ಚನ್ನಗಿರಿ ಪೊಲೀಸ್‌ ಠಾಣೆಗೆ ಕರೆ ತರಲಾಗಿತ್ತು. ಕರೆತಂದ ಏಳು ನಿಮಿಷದೊಳಗೆ ಆ ಯುವಕ ಮೃತಪಟ್ಟಿದ್ದಾನೆ. ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮೃತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಗ್ಗೆ ವಿಚಾರಣೆ ನಡೆಸಲು ಆತನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಅಲ್ಲಿ ಮೃತಪಟ್ಟಿರುವುದರಿಂದ ಪೊಲೀಸರೇ ಸಾವಿಗೆ ಕಾರಣ ಎಂದು ಆರೋಪಿಸಿ ಆತನ ಕುಟುಂಬದವರು ಪ್ರತಿಭಟನೆ ನಡೆಸಿ, ಗಲಾಟೆ ಮಾಡಿದ್ದಾರೆ’ ಎಂದರು.

‘ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡುವವರು, ಹಲ್ಲೆ ನಡೆಸುವವರು, ತಲೆ ಕತ್ತರಿಸುತ್ತೇವೆ ಎನ್ನುವವರನ್ನು ಸುಮ್ಮನೆ ಬಿಡುವುದಿಲ್ಲ. ಧಮಕಿ ಹಾಕುವವರ ಬಗ್ಗೆ ಮೃದು ಧೋರಣೆ ತಳೆಯುವ ಪ್ರಶ್ನೆ ಇಲ್ಲ. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಜರುಗಿಸುತ್ತಾರೆʼ ಎಂದು ಹೇಳಿದರು.

ಪೊಲೀಸ್‌ ಠಾಣೆಗೆ ನುಗ್ಗಲು ಜನರು ಪ್ರಯತ್ನಿಸಿದ್ದರು. ಕಲ್ಲು ತೂರಾಟದಿಂದ ಪೊಲೀಸರು ಗಾಯಗೊಂಡಿದ್ದಾರೆ. ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದರು.

‘ಏನು ಬೇಕಾದರೂ ಮಾಡಬಹುದು ಎನ್ನುವ ಧೋರಣೆಯನ್ನು ಸಹಿಸುವುದಿಲ್ಲ. ಪೊಲೀಸ್‌ ಠಾಣೆಗೆ ಬಂದು ಧಮಕಿ ಹಾಕುವವರನ್ನು, ತಲೆ ಕಡಿತೀವಿ ಎನ್ನುವವರನ್ನು ಬಿಡಲು ಆಗುತ್ತದೆಯೆ? ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಮಾದರಿ ಗಲಾಟೆ ಮಾಡುತ್ತಾರೆಂಬ ಮಾಹಿತಿ ನನಗೂ ಬಂದಿತ್ತು. ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT