ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಪ್ರಕಾಶ್ ಹೆಗಡೆ (45) ಎಂಬುವರು ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಮೂಡುಬಿದಿರೆಯ ಪ್ರಕಾಶ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಪತ್ನಿ ಹಾಗೂ ಮಗುವಿನ ಜೊತೆ ಡಿಫೆನ್ಸ್ ಕಾಲೊನಿಯಲ್ಲಿ ವಾಸವಿದ್ದರು. ಆತ್ಮಹತ್ಯೆ ಸಂಬಂಧ ಪತ್ನಿ ಹೇಳಿಕೆ ನೀಡಿದ್ದು, ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಂಟಿನ ಕಾರ್ಖಾನೆ ನಡೆಸುತ್ತಿದ್ದ ಪ್ರಕಾಶ್, ಅದರ ಜೊತೆಯಲ್ಲೇ ಟ್ರಾವೆಲ್ಸ್ ಏಜೆನ್ಸಿಯನ್ನೂ ಹೊಂದಿದ್ದರು. ಉದ್ಯಮಕ್ಕಾಗಿ ಹಲವೆಡೆ ಸಾಲ ಪಡೆದಿದ್ದರು’ ಎಂದೂ ತಿಳಿಸಿದರು.
'ಉದ್ಯಮದಲ್ಲಿ ನಷ್ಟವಾಗಿದ್ದರಿಂದ, ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ನೊಂದಿದ್ದ ಪ್ರಕಾಶ್, ಪತ್ನಿ ಬಳಿಯೂ ಅಳಲು ತೋಡಿಕೊಂಡಿದ್ದರು. ಶನಿವಾರ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಪ್ರಕಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದೂ ಹೇಳಿದರು.