ಬೆಂಗಳೂರು: ‘ಐದು ಬಾರಿ ಕರ್ನಾಟಕ ಹೈಕೋರ್ಟ್ನ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿರುವ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ತಮ್ಮ ವೃತ್ತಿ ನಿಷ್ಠೆಯ ಪರಿಣಾಮ; ಇವತ್ತು ಕಾವೇರಿ ವಿವಾದ ಸೇರಿದಂತೆ ಅನೇಕ ಪ್ರಮುಖ ಪ್ರಕರಣಗಳಲ್ಲಿ ಕರ್ನಾಟಕ ಪರ ಮೈಲುಗಲ್ಲುಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ‘ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಬಣ್ಣಿಸಿದರು.
ಇದೇ ಪ್ರಥಮ ಬಾರಿಗೆ ‘ವಕೀಲರ ವಾಹಿನಿ‘ ನಿಯತಕಾಲಿಕೆ ವತಿಯಿಂದ ನೀಡಲಾಗುವ ‘ವಕೀಲ ವಿಭೂಷಣ‘ ಪ್ರಶಸ್ತಿಗೆ ಭಾಜನರಾದ ಬಿ.ವಿ.ಆಚಾರ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಆಚಾರ್ಯ ತಮ್ಮ ವೃತ್ತಿಬದ್ಧತೆಯ ಮೂಲಕ ಕಿರಿಯ ವಕೀಲರಿಗೆ ಸದಾ ಮಾರ್ಗದರ್ಶಿಯಾಗಿದ್ದಾರೆ‘ ಎಂದರು.
‘ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಚಾರ್ಯ ವಿಶೇಷ ಪ್ರಾಸಿಕ್ಯೂಟರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಾಮಾಣಿಕ ವಕೀಲರ ಪಾತ್ರ ಹೇಗಿರುತ್ತದೆ ಎಂಬುದನ್ನು ಸಾಬೀತುಪಡಿಸಿದ್ದು ರಾಜ್ಯದ ಹೆಮ್ಮೆ‘ ಎಂದರು.
ಸಮಾರಂಭದಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ‘ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಆಚಾರ್ಯ ಅವರು ಶ್ರಮಿಸಿರುವ ಪರಿ ವಕೀಲ ವೃಂದಕ್ಕೆ ಮಾದರಿಯಾಗಿದೆ. ಆಚಾರ್ಯ ಅವರು ತಮ್ಮ ವೃತ್ತಿಬದ್ಧತೆ ಮತ್ತು ವೃತ್ತಿ ಸಂಹಿತೆಯ ಪಾಲನೆ ಅವರನ್ನು ಈ ಎತ್ತರಕ್ಕೆ ಕರೆದುಕೊಂಡು ಬಂದಿದೆ‘ ಎಂದರು.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಪ್ರಭಾಕರ ಶಾಸ್ತ್ರಿ, ಸಿ.ಎಂ.ಪೂಣಚ್ಚ, ಕೆ.ಅರವಿಂದ್, ರಾಜೇಶ ರೈ ಕಲ್ಲಂಗಳ, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಆನಂದ ಬೈರಾರೆಡ್ಡಿ, ನಿವೃತ್ತ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ ಬಿ.ಹೊಸೂರು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಲ್.ಜಗದೀಶ್, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಂ.ಅರುಣ್ ಶ್ಯಾಮ್ ಸೇರಿದಂತೆ ಹಿರಿ, ಕಿರಿಯ ವಕೀಲರು ಪಾಲ್ಗೊಂಡಿದ್ದರು.