ಬೆಂಗಳೂರು: ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್ ಪಶ್ಚಿಮ) ಶಸ್ತ್ರಗಾರಕ್ಕೆ ನುಗ್ಗಿದ್ದ ಸುಮಾರು 70 ಮಂದಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಿಎಆರ್ ಕಾನ್ಸ್ಟೆಬಲ್ ರುದ್ರೇಶ್ ನಾಯ್ಕ್ ಅವರು ದೂರು ನೀಡಿದ್ದಾರೆ. ಸುಮಾರು 70 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಉಲ್ಲಾಳ ಬಳಿ ಸಿಎಆರ್ ಘಟಕವಿದೆ. ಈ ಜಾಗ ಹಾಗೂ ಸುತ್ತಮುತ್ತಲಿನ ಜಾಗದ ಸಂಬಂಧ ವ್ಯಾಜ್ಯ ಇರುವ ಮಾಹಿತಿ ಇದೆ. ಜಾಗ ನಮ್ಮದೆಂದು ವಾದಿಸಿದ್ದ ಆರೋಪಿಗಳು, ಶಸ್ತ್ರಗಾರಕ್ಕೆ ನುಗ್ಗಿದ್ದರು. ಜಾಗ ಖಾಲಿ ಮಾಡುವಂತೆ ಪೊಲೀಸರಿಗೆ ಬೆದರಿಸಿದ್ದರು. ಸಮವಸ್ತ್ರ ಹಿಡಿದು ಎಳೆದಾಡಿದ್ದರು.’
‘ಜಾಗ ತೆರವು ಮಾಡುವ ಉದ್ದೇಶದಿಂದ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಜೆಸಿಬಿ ಯಂತ್ರ, ಕ್ಯಾಂಟರ್, ಲಾರಿ ಹಾಗೂ ನೀರಿನ ಟ್ಯಾಂಕರ್ ಸಹ ತಂದಿದ್ದರೆಂಬ ಮಾಹಿತಿ ಇದೆ. ಆರೋಪಿಗಳು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.