ಬೆಂಗಳೂರು: ಚಂದ್ರಯಾನ ಉಡಾವಣೆಯ ಸ್ಮರಣಾರ್ಥವಾಗಿ ಎನ್ಸಿಆರ್ಟಿಯು ಚಂದ್ರಯಾನ ಉತ್ಸವ ಎಂಬ ಮಾಡ್ಯೂಲ್ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವುದಕ್ಕೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಖಂಡಿಸಿದೆ.
ಚಂದ್ರಯಾನ–2ರ ಯಶಸ್ವಿಯಲ್ಲಿ ವಿಜ್ಞಾನಿಗಳ ಪಾತ್ರವನ್ನು ಎಐಡಿಎಸ್ಒ ಶ್ಲಾಘಿಸುತ್ತದೆ. ಆದರೆ, ಖಗೋಳ ವಿಜ್ಞಾನವು ಭಾರತಕ್ಕೆ ಹೊಸತೇನಲ್ಲ. ಅದು ವೇದಗಳ ಕಾಲದಲ್ಲೇ ನಮ್ಮಲ್ಲಿತ್ತು ಎಂಬ ಎನ್ಸಿಆರ್ಟಿಯು ಪ್ರತಿಪಾದನೆ ಸರಿಯಲ್ಲ. ಪುಷ್ಪಕ ವಿಮಾನದ ಉದಾಹರಣೆ ನೀಡಲಾಗಿದ್ದು, ವೈಮಾನಿಕ ಶಾಸ್ತ್ರವೆಂಬ ಪುಸ್ತಕವಿತ್ತೆಂದು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಆರ್ಗನೈಸೇಷನ್ನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ದೂರಿದ್ದಾರೆ.
‘ಪುಷ್ಪಕ ವಿಮಾನವು ಒಂದು ಸುಂದರವಾದ ಪೌರಾಣಿಕ ಪರಿಕಲ್ಪನೆಯಾಗಿದೆ. ವೇದಗಳ ಕಾಲದಲ್ಲಿ ರಚಿಸಲ್ಪಟ್ಟಿದ್ದು ಎಂದು ಹೇಳಲಾಗುವ ವೈಮಾನಿಕ ಶಾಸ್ತ್ರವು 1923ರಲ್ಲಿ ಬರೆದದ್ದು ಎಂದು ಈಗಾಗಲೇ ಐ. ಐ. ಎಸ್. ಸಿ. ಯು ನಡೆಸಿದ ವೈಜ್ಞಾನಿಕ ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ರೀತಿಯ ಅವೈಜ್ಞಾನಿಕ ವಾದಗಳು ನಮ್ಮ ದೇಶದಲ್ಲಿ ವಾಸ್ತವವಾಗಿ ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳ ತೇಜೋವಧೆ ಮಾಡುತ್ತವೆ. ಮುಖ್ಯವಾಗಿ ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವ ಹಾಗೂ ತಾರ್ಕಿಕ ಚಿಂತನೆಗೆ ಧಕ್ಕೆ ತರುತ್ತದೆ. ಆದ್ದರಿಂದ ಎನ್ಸಿಆರ್ಟಿಯು ಕೂಡಲೇ ಈ ಮಾಡ್ಯೂಲ್ ಅನ್ನು ಹಿಂಪಡೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.