ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೇಗೌಡರ ಸಾವನ್ನು ಬಯಸಿದವನಲ್ಲ ನಾನು: ಎಲ್‌.ಆರ್‌.ಶಿವರಾಮೇಗೌಡ

Published 24 ಮೇ 2024, 1:00 IST
Last Updated 24 ಮೇ 2024, 1:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಸಾವನ್ನು ನಾನೆಂದೂ ಬಯಸಿದವನಲ್ಲ. ಅವರು ಶತಾಯುಷಿಯಾಗಲೆಂದು ಪ್ರಾರ್ಥಿ ಸುತ್ತೇನೆ’ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿದ್ದಾರೆ.

ಪೇಸ್‌ಬುಕ್‌ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ‘ರಾಜಕಾರಣದಲ್ಲಿ ಟೀಕೆ–ಟಿಪ್ಪಣಿಗಳು ಸಾಮಾನ್ಯ. ದೇವೇಗೌಡರ ಸಾವನ್ನು ಬಯಸುವ ಕೆ‌ಟ್ಟ ಸ್ವಭಾವ ನನ್ನದಲ್ಲ. ಆದರೆ ನನ್ನ ರಾಜಕೀಯ ವಿರೋಧಿಗಳು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನನ್ನ ಮೂಲಕ ₹100 ಕೋಟಿ ಹಣದ ಪ್ರಸ್ತಾಪ ಮತ್ತು ದೇವರಾಜೇಗೌಡರಿಗೆ ಕ್ಯಾಬಿನೆಟ್ ದರ್ಜೆ ನೀಡುವ ಕುರಿತು ನನ್ನ ಧ್ವನಿಯನ್ನು ಮಾರ್ಪಡಿಸಿ ಆಡಿಯೊ ಹರಿ ಬಿಡಲಾಗಿದೆ’ ಎಂದಿದ್ದಾರೆ.

‘ನನ್ನ 40 ವರ್ಷಗಳ ರಾಜಕಾರಣದಲ್ಲಿ ಎಚ್‌.ಡಿ.ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಎಂದೂ ನಿಂದಿಸಿಲ್ಲ. ನಾನು ಸತ್ಯಹರಿಶ್ಚಂದ್ರನ ತುಂಡು ಅಲ್ಲದಿದ್ದರೂ, ಬೇರೆಯವರಿಗೆ ಹೋಲಿಸಿದರೆ ನಾನೊಬ್ಬ ಪ್ರಾಮಾಣಿಕ ರಾಜಕಾರಣಿ’ ಎಂದು ಹೇಳಿಕೊಂಡಿದ್ದಾರೆ.

‘ಈ ಪಿತೂರಿ ಹಿಂದೆ ಇರುವ ಕಾಣದ ಕೈಗಳು ಯಾರದೆಂಬುದು ನನಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಆ ವ್ಯಕ್ತಿ ಯಾರೆಂದು ನಿಮಗೆ ಆಧಾರ ಸಮೇತ ತಿಳಿಸುತ್ತೇನೆ. ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂಬುದು ಆಗ ಗೊತ್ತಾಗುತ್ತದೆ. ನನ್ನ ಹೆಸರಿನಲ್ಲಿ ಆಡಿಯೊ ಮಾಡಿ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ’ ಎಂದು ಶಿವರಾಮೇಗೌಡ ಹೇಳಿದ್ದಾರೆ.

‘ರಾಜ್ಯದಲ್ಲಿ ಏ.26ರಂದು ಲೋಕಸಭಾ ಮತದಾನ ನಡೆಯಿತು. ದೇವರಾಜೇಗೌಡ ಏ.29ರಂದು ಪ್ರಥಮವಾಗಿ ನನ್ನನ್ನು ಭೇಟಿಯಾದರು. ಆ ವೇಳೆಗಾಗಲೇ ಪೆನ್‌ಡ್ರೈವ್‌ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಪೆನ್‌ಡ್ರೈವ್‌ಗೂ ನನಗೂ ಸಂಬಂಧವಿಲ್ಲ. ಆದರೂ ವಿರೋಧಿಗಳು ಬಿಡದೇ ನನಗೆ ಸಂಬಂಧ ಕಲ್ಪಿಸುತ್ತಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT