ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೇಶ್ವರ್‌ಗೆ ಪುಟ್ಟಣ್ಣ ಪರೋಕ್ಷ ಬೆಂಬಲ

ನಿಮ್ಮಷ್ಟದಂತೆ ಮತದಾನ ಮಾಡುವ ತೀರ್ಮಾನ ಕೈಗೊಳ್ಳಿ: ಬೆಂಬಲಿಗರಿಗೆ ಕಿವಿಮಾತು
Last Updated 7 ಮೇ 2018, 13:31 IST
ಅಕ್ಷರ ಗಾತ್ರ

ರಾಮನಗರ: ಜೆಡಿಎಸ್‌ನಿಂದ ಆಯ್ಕೆಗೊಂಡಿರುವ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಅವರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.

ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ಭಾನುವಾರ ಈ ಇಬ್ಬರು ನಾಯಕರು ಅನೌಪಚಾರಿಕವಾಗಿ ಭೇಟಿ ಮಾಡಿದರು. ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಪುಟ್ಟಣ್ಣ ‘ಸಿ.ಪಿ. ಯೋಗೇಶ್ವರ್‌ ಅವರು ತಾಲ್ಲೂಕಿನಲ್ಲಿ ಕೈಗೊಂಡ ನೀರಾವರಿ ಯೋಜನೆಯು ರಾಜ್ಯಕ್ಕೆ ಮಾದರಿಯಾಗಿದೆ. ಇಂತಹವರನ್ನು ಜನರು ಪಕ್ಷಾತೀತವಾಗಿ ಬೆಂಬಲಿಸಬೇಕು’ ಎನ್ನುವ ಮೂಲಕ ತಮ್ಮದೇ ಪಕ್ಷದ ನಾಯಕರಾಗಿರುವ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

‘ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರೋಧವಾಗಿ ಕೆಲಸ ಮಾಡಿದವರನ್ನೇ ಕಟ್ಟಿಕೊಂಡು ನನ್ನೂರಿನಲ್ಲಿ ಪ್ರಚಾರ ಕೈಗೊಂಡಿದ್ದು ನನಗೆ ಹಾಗೂ ನನ್ನ ಬೆಂಬಲಿಗರಿಗೆ ನೋವುಂಟು ಮಾಡಿತು. ಹೀಗಾಗಿ ನನ್ನ ಸಹೋದರರು ಯೋಗೇಶ್ವರ್‌ ಬೆಂಬಲಿಸುತ್ತೇವೆ ಎಂದು ತೀರ್ಮಾನ ಕೈಗೊಂಡರು. ಇದಕ್ಕೆ ನಾನು ಅಡ್ಡಿಪಡಿಸಲಿಲ್ಲ. ಹಳ್ಳಿಗಳಲ್ಲಿನ ನನ್ನ ಬೆಂಬಲಿಗರೂ ತಮ್ಮಿಷ್ಟದ ಪಕ್ಷಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದೇನೆ’ ಎಂದು ವಿವರಿಸಿದರು.

‘ಕುಮಾರಸ್ವಾಮಿ ರಾಮನಗರದಲ್ಲಿ ಗೆಲ್ಲಬೇಕು. ಗೆದ್ದು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನಾಸೆ’ ಎಂದರು.

‘ರಾಜ್ಯದಲ್ಲಿ ಕುಮಾರಸ್ವಾಮಿ ಒಬ್ಬರೇ ಒಕ್ಕಲಿಗ ನಾಯಕರಲ್ಲ. ಯೋಗೇಶ್ವರ್‌, ಡಿ.ಕೆ. ಶಿವಕುಮಾರ್, ಬಾಲಕೃಷ್ಣ, ಚಲುವರಾಯಸ್ವಾಮಿ.. ಹೀಗೆ ಇನ್ನೂ ಹಲವು ನಾಯಕರು ಇದ್ದಾರೆ. ಹೀಗಾಗಿ ಒಕ್ಕಲಿಗರೆಲ್ಲರೂ ಒಂದೇ ಪಕ್ಷ ಬೆಂಬಲಿಸುತ್ತಾರೆ ಎಂದು ಹೇಳಲಾಗದು. ಅದು ಅವರ ವೈಯಕ್ತಿಕ ಆಯ್ಕೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎರಡೂ ಕಡೆ ಸ್ಪರ್ಧೆ ಸರಿಯಲ್ಲ: ‘ಕುಮಾರಸ್ವಾಮಿ, ಸಿದ್ದರಾಮಯ್ಯ, ಶ್ರೀರಾಮುಲು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಇವರು ಎರಡೂ ಕ್ಷೇತ್ರದಲ್ಲಿ ಗೆದ್ದರೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಇನ್ನೊಂದು ಕ್ಷೇತ್ರಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಇದರಿಂದ ಜನರ ಸಮಯ ಪೋಲು. ಹೀಗಾಗಿ ಎರಡೂ ಕಡೆ ಸ್ಪರ್ಧೆ ನಿರ್ಧಾರ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಶ್ರೀಕೃಷ್ಣನಂತೆ ಆಶೀರ್ವಾದ ಮಾಡುತ್ತಾರೆ’

‘ಬೆಂಬಲ ನೀಡುವುದಾಗಿ ಪುಟ್ಟಣ್ಣ ನೇರ ಭರವಸೆ ನೀಡಿಲ್ಲ. ಆದರೆ ಅಂತರಂಗದಲ್ಲಿ ಅವರು ನಮ್ಮ ಪರ ನಿಲ್ಲುವ ವಿಶ್ವಾಸ ಇದೆ’ ಎಂದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಪ್ರತಿಕ್ರಿಯಿಸಿದರು.

ಪುಟ್ಟಣ್ಣ ಜೊತೆಗಿನ ಭೇಟಿ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಪುಟ್ಟಣ್ಣ ಹಾಗೂ ನನ್ನ ನಡುವೆ ಇಷ್ಟು ವರ್ಷ ಯಾವುದೇ ರಾಜಕೀಯ ಒಡಂಬಡಿಕೆ ಇರಲಿಲ್ಲ. ಅವರು ತಮ್ಮದೇ ಆದ ರಾಜಕೀಯ ಹೋರಾಟಗಳಿಂದ ಬೆಳೆದವರು. ಈಗ ಅವರ ಕುಟುಂಬದವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರಿಗೆ ನನ್ನ ನೀರಾವರಿ ಸಾಧನೆಯ ಫಲ ಸಿಕ್ಕಿದೆ. ಹೀಗಾಗಿ ಅವರ ಸಹಾಯ ಪಡೆಯುತ್ತೇನೆ. ಪುಟ್ಟಣ್ಣ ಅವರಿಗೆ ತಾಲ್ಲೂಕಿನಲ್ಲಿ ಅವರದ್ದೇ ಆದ ಶಕ್ತಿ ಇದೆ. ಅವರು ಶ್ರೀಕೃಷ್ಣನಂತೆ ಹಿಂದೆ ನಿಂತು ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

**
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಾನು ತಟಸ್ಥನಾಗಿರಲು ತೀರ್ಮಾನಿಸಿದ್ದೇನೆ. ಪ್ರಚಾರ ಮಾಡುವಂತೆ ಜೆಡಿಎಸ್ ನಾಯಕರಿಂದಲೂ ಆಹ್ವಾನ ಬಂದಿಲ್ಲ
– ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT