ಬೆಂಗಳೂರು: ನಗರದಲ್ಲಿ ಬುಧವಾರ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಗೆ ವಿವಿಧ ಸಂಘ–ಸಂಸ್ಥೆಗಳು ಶ್ರದ್ಧಾಂಜಲಿ ಸಲ್ಲಿಸಿದವು.
‘ಕಳೆದ ಬಾರಿ ಲಾಕ್ಡೌನ್ ನಡುವೆಯೂ ದೊರೆಸ್ವಾಮಿ ಅವರು ನಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದರು‘ ಎಂದು ಸಿಐಟಿಯು ಕಾರ್ಯದರ್ಶಿ ಕೆ. ಮಹಾಂತೇಶ್ ಸ್ಮರಿಸಿದರು.
’ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಬಳಿಕ ನಡೆಸಲಾದ ವಿದ್ಯಾರ್ಥಿಗಳ ಹೋರಾಟ, ರೈತ ಕಾರ್ಮಿಕ ಚಳವಳಿಗಳು, ಮೈಸೂರು ಚಲೋ ಹೋರಾಟ, ಗೋವಾ ವಿಮೋಚನಾ ಚಳವಳಿ ಹಾಗೂ ನರಗುಂದ ರೈತ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು‘ ಎಂದು ಹೇಳಿದರು.
’ಆಳುವವರು ತಪ್ಪು ಮಾಡಿದಾಗ ಅದು ಯಾರೇ ಆಗಿರಲಿ ಟೀಕಿಸಲು ಹಿಂಜರಿಯುತ್ತಿರಲಿಲ್ಲ. ಅಂತಹ ಮೇರು ವ್ಯಕ್ತಿತ್ವ ದೂರವಾಗಿದ್ದು ರಾಜ್ಯದ ಜನ ಚಳವಳಿಗೆ ಆದ ಅಪಾರ ನಷ್ಟ’ ಎಂದರು.
ಎಐಡಿಎಸ್ಒ ನಮನ: ’ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾತಂತ್ರ್ಯಾನಂತರ ಎಲ್ಲ ರೀತಿಯ ಅನ್ಯಾಯಗಳ ವಿರುದ್ಧ ದೊರೆಸ್ವಾಮಿಯವರು ಧ್ವನಿ ಎತ್ತಿದ್ದರು‘ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಸ್ಮರಿಸಿದೆ.
’ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದಿಕರಣದ ವಿರುದ್ಧವೂ ಅವರು ಹೋರಾಡಿದ್ದರು‘ ಎಂದು ಎಐಡಿಎಸ್ಒದ ಅಧ್ಯಕ್ಷೆ ಅಶ್ವಿನಿ ಕೆ.ಎಸ್. ನೆನಪು ಮಾಡಿಕೊಂಡಿದ್ದಾರೆ.