ಬೆಂಗಳೂರು: ಸ್ವಾತಂತ್ರ್ಯ ಭಾರತದ75ನೇ ವರ್ಷದ ಸ್ಮರಣೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ ಹಮ್ಮಿಕೊಂಡಿರುವ ‘ಅಮೃತ ಮಹೋತ್ಸವ ಬೀದಿ ನಾಟಕ ಸರಣಿ’ಯನ್ನು ಕುಲಪತಿ ಕೆ.ಆರ್.ವೇಣುಗೋಪಾಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಪ್ರದರ್ಶನ ಕಲಾ ವಿಭಾಗ ಹಮ್ಮಿಕೊಂಡಿರುವ ನಾಟಕ ಸರಣಿಯಲ್ಲಿ 75 ವಿವಿಧ ಬೀದಿ ನಾಟಕಗಳು ಇತರೆ ಸ್ಥಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣಲಿ’ ಎಂದು ಶುಭ ಹಾರೈಸಿದರು.
ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಜೀವನ, ಉಪ್ಪಿನ ಸತ್ಯಾಗ್ರಹದ ಪರಿಣಾಮ ಮತ್ತು ಗಾಂಧೀಜಿ ಅವರು ಸೂಟ್ ತ್ಯಜಿಸಿ, ಖಾದಿ ಧರಿಸಿದ ಘಟನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶನ ಕಲಾ ವಿಭಾಗದ ಪಿಎಚ್.ಡಿ ವಿದ್ಯಾರ್ಥಿಗಳು ‘ಈಸೂರು ದಂಗೆ’ ಬೀದಿ ನಾಟಕ ಪ್ರದರ್ಶಿಸಿದರು.
ಪ್ರದರ್ಶನ ಕಲಾ ವಿಭಾಗದ ಪ್ರೊ.ಹಂಸಿನಿ ನಾಗೇಂದ್ರ ಹಾಗೂ ಇತರರು ಭಾಗವಹಿಸಿದ್ದರು.